ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ, ನಿರ್ದೇಶಕ ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಿಡುಗಡೆ ಆಗಿ ಇಂದಿಗೆ ನಾಲ್ಕು ದಿನಗಳಾಗಿರುತ್ತಿತ್ತು. ಆದರೆ, ಕರೊನಾದಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಯಿತು. ಸಿನಿಮಾಕ್ಕಾಗಿ ಕಾತರದಿಂದ ಕಾದಿದ್ದ ಅಭಿಮಾನಿಗಳಿಗೂ ನಿರಾಸೆ ಆಯಿತು. ಅದಾದ ಬಳಿಕ ಆಗಿದ್ದು ಒಳ್ಳೇದೇ ಆಯಿತು ಎಂದು ನಿಟ್ಟುಸಿರು ಬಿಟ್ಟು ಮನೆಯಲ್ಲಿ ಉಳಿದರು. ಹೀಗಿರುವಾಗಲೇ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. ಆ ಒಂದು ಮಾತಿನಿಂದ ಅಭಿಮಾನಿಗಳಲ್ಲಿ ಮತ್ತೆ ಆಸೆ ಗರಿಗೆದರಿದೆ. ಆದರೆ, ಯಾವಾಗ ಎಂಬುದನ್ನು ಹೇಳಿಲ್ಲ.
ಹೌದು, ಟ್ವಿಟರ್ನಲ್ಲಿ ಸಿನಿಮಾ ಹೊತ್ತು ಬರುವ ಬಗ್ಗೆ ಹೇಳಿಕೊಂಡಿರುವ ದರ್ಶನ್ ಗುಡ್ ಪ್ರೈಡೇ ಬಗ್ಗೆಯೂ ಶುಭಾಶಯ ಕೋರಿದ್ದಾರೆ. ಎಲ್ಲವೂ ಮೊದಲಿನಂತಾದರೆ ಶೀಘ್ರದಲ್ಲಿ ರಾಬರ್ಟ್ ಜತೆಯಲ್ಲಿ ಆದಷ್ಟು ಬೇಗ ಆಗಮಿಸುತ್ತೇವೆ. ಸ್ಟೇ ಹೋಮ್ ಸ್ಟೇ ಸೇಫ್ ಎಂದಿದ್ದಾರೆ ದರ್ಶನ್.
ದರ್ಶನ್ ಈ ರೀತಿ ಹೇಳಿಕೊಂಡಿದ್ದೇ ತಡ, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ, ಆದಷ್ಟು ಬೇಗ ಬನ್ನಿ ಬಾಸ್, ಕಾದು ಸುಸ್ತಾಗಿದೆ ಎಂಬಂಥ ಕಮೆಂಟ್ಗಳು ಸಂದಾಯವಾಗುತ್ತಿವೆ. ಸದ್ಯ ಲಾಕ್ಡೌನ್ ವಿಸ್ತರಣೆ ಆಗಿರುವ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.