ಬೆಂಗಳೂರು: ಪಕ್ಷದ ನಾಯಕರೇ ಲಿಂಗಾಯತ ಅಧಿಕಾರಿಗಳನ್ನು ಸರ್ಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆ ಮುಂದೆ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಐಪಿಎಸ್, ಐಎಎಸ್, ಉಪ ವಿಭಾಗಾಧಿಕಾರಿಗಳ ಜಾತಿ ಮಾಹಿತಿ ಇರುವ ಪಟ್ಟಿ ಸಿಎಂ ಕಚೇರಿಯಿಂದ ಬಿಡುಗಡೆಯಾಗಿದೆ.
ಇದನ್ನು ಓದಿ: ರಾಮನಗರ ಜೆಡಿಎಸ್ ಸಭೆಯಲ್ಲಿ ಸಿಡಿದೆದ್ದ ಎಚ್.ಡಿ. ದೇವೇಗೌಡರು
ತಿಂಗಳ ಹಿಂದಷ್ಟೇ ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ತಮ್ಮ ಸಮಾಜದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಬಳಿಕ ಗುಸುಗುಸು ಚರ್ಚೆ ನಡೆದೇ ಇತ್ತು. ಎರಡು ದಿನಗಳ ಹಿಂದೆ ಕಾಂಗ್ರೆಸ್ನ ಹಿರಿಯ ಶಾಸಕರ ಶಾಮನೂರು ಶಿವಶಂಕರಪ್ಪ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ ವ್ಯಾಪಕ ಚರ್ಚೆ ಆರಂಭವಾಗಿದೆ.
ಪಟ್ಟಿ ಬಿಡುಗಡೆ
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜಾತಿವಾರು ಪಟ್ಟಿ ಬಿಡುಗಡೆಯಾಗಿದೆ. ಹಾಗೆಯೇ ಕುಲಪತಿಗಳ ಜಾತಿವಾರು ಲೆಕ್ಕವನ್ನು ಹೊರಗೆಡಹಿದೆ. ಅದರ ಪ್ರಕಾರ 13 ಮಂದಿ ಲಿಂಗಾಯತರಿದ್ದರೆ, 8 ಒಕ್ಕಲಿಗರು, 8 ಮಂದಿ ಸಾಮಾನ್ಯ ಹಾಗೂ ಬ್ರಾಹ್ಮಣ, ಆರು ಒಬಿಸಿ, ಐದು ಎಸ್ಸಿ, 1 ಎಸ್ಟಿ ಸೇರಿ ಒಟ್ಟು 41 ಮಂದಿ ಇದ್ದಾರೆ. ಒಬ್ಬರೂ ಮುಸ್ಲಿಮರಿಲ್ಲ ಎಂಬ ಮಾಹಿತಿ ಅದರಲ್ಲಿದೆ.
31 ಜಿಲ್ಲೆಗಳ ಜಿಪಂ ಸಿಇಒಗಳು, 47 ಐಪಿಎಸ್ ಅಧಿಕಾರಿಗಳು, 53 ಎಸಿಗಳು ಹಾಗೂ 31 ಡಿಸಿಗಳ ಜಾತಿ ಮಾಹಿತಿ ಈ ಪಟ್ಟಿಯಲ್ಲಿದೆ.