ರಾಂಚಿ: ಜಾರ್ಖಂಡ್ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ನಡುವೆ ದೆಹಲಿಗೆ ಭೇಟಿ ನೀಡಿದ್ದೇಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರ ಸಹೋದರ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಶಾಸಕ ಬಸಂತ್ ಸೊರೆನ್ ನೀಡಿದ ಉತ್ತರ ಕೇಳಿ ವರದಿಗಾರರೇ ತಬ್ಬಿಬ್ಬಾದ ಪ್ರಸಂಗ ಜರುಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಸಂತ್ ಸೊರೆನ್, ಒಳಉಡುಪುಗಳು ಖಾಲಿಯಾಗಿದ್ದವು, ಹೀಗಾಗಿ ಅವುಗಳನ್ನು ತರಲೆಂದು ದೆಹಲಿಗೆ ತೆರಳಿದ್ದೆ ಎಂದು ಹೇಳಿದರು. ಈ ವೇಳೆ ಸುದ್ದಿಗಾರರು ಅವರನ್ನು ಮತ್ತಷ್ಟು ಪ್ರಚೋದಿಸಿದಾಗ, ಹೌದು ನಾನು ಒಳಉಡುಪುಗಳನ್ನು ಕೊಂಡು ತಂದೆ ಎಂದರು.
ಬಸಂತ್ ಸೋರೆನ್ ಹೇಳಿಕೆ ಕೇಳಿ ವರದಿಗಾರರು ಒಂದು ಕ್ಷಣ ತಬ್ಬಿಬ್ಬಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
#WATCH | Dumka: "I had run out of undergarments, so I went to Delhi to purchase them. I get them from there," says JMM MLA and Jharkhand CM Hemant Soren's brother, Basant Soren when asked about his visit to Delhi amid recent political unrest in the state.
(07.09.2022) pic.twitter.com/GBiNWZaLzr
— ANI (@ANI) September 8, 2022
ಗಣಿ ಗುತ್ತಿಗೆ ಅಕ್ರಮ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ಗೆ ಅನರ್ಹತೆ ಭೀತಿ ಇದೆ. ಅಧಿಕಾರ ದುರುಪಯೋಗ ಸಂಬಂಧ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಚುನಾವಣಾ ಆಯೋಗವು ರಾಜ್ಯಪಾಲರಿಗೆ ಆಗಸ್ಟ್ 25ರಂದು ಶಿಫಾರಸು ಮಾಡಿದೆ. ಆದರೆ, ಈವರೆಗೂ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ತಮ್ಮ ಗಣಿ ಗುತ್ತಿಗೆಯೊಂದನ್ನು ತಾವೇ ವಿಸ್ತರಿಸಿಕೊಳ್ಳುವ ಮೂಲಕ ಸೊರೆನ್ ಅವರು ಚುನಾವಣೆ ಕಾನೂನು ಉಲ್ಲಂಘಿಸಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತನ್ನ ಅಭಿಪ್ರಾಯವನ್ನು ರಾಜ್ಯಪಾಲರಿಗೆ ಕಳುಹಿಸಿದೆ.
ಯಾವಾಗ ಶಿಫಾರಸು ಮಾಡಿತೋ ಸರ್ಕಾರದಲ್ಲಿ ಅಸ್ಥಿರತೆ ಉಂಟಾಯಿತು. ಇದರ ಬೆನ್ನಲ್ಲೇ ಆಪರೇಷನ್ ಕಮಲದ ಭೀತಿಯಿಂದ ಸೊರೆನ್ ಅವರು ತಮ್ಮ ಶಾಸಕರ ಸಮೇತ ಛತ್ತೀಸ್ಗಢದ ಐಷಾರಾಮಿ ಹೋಟೆಲ್ನಲ್ಲಿ ಕೆಲ ದಿನಗಳ ಬೀಡುಬಿಟ್ಟಿದ್ದರು. ಸೆ.5ರಂದು ಛತ್ತೀಸ್ಗಢದಿಂದ ನೇರವಾಗಿ ಜಾರ್ಖಂಡ್ ವಿಧಾನಸಭೆಗೆ ತಮ್ಮ ಶಾಸಕರೊಂದಿಗೆ ಆಗಮಿಸಿದ ಸೊರೆನ್ ವಿಶ್ವಾಸ ಮತ ಸಾಬೀತು ಮಾಡಿದರು. ಇದರ ನಡುವೆ ಬಸಂತ್ ಸೊರೆನ್ ಅವರು ದೆಹಲಿಗೆ ಭೇಟಿ ನೀಡಿದ್ದರು. ಈ ಸಂಬಂಧ ವರದಿಗಾರರು ಪ್ರಶ್ನಿಸಿದಾಗ ಈ ಮೇಲಿನಂತೆ ಅವರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)
ಲೈಗರ್ ಸಿನಿಮಾ ಹೀನಾಯ ಸೋಲು: ಬಾಡಿಗೆ ಹೊರೆ ತಡೆಯಲಾರದೇ ಮುಂಬೈ ತೊರೆಯಲು ಪುರಿ ಜಗನ್ನಾಥ್ ನಿರ್ಧಾರ