ನವದೆಹಲಿ: ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದ ಆ ಕುತೂಹಲಕಾರಿ ದಿನ ಬಂದೇ ಬಿಟ್ಟಿದೆ. ಹೌದು, ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಿದ್ದರೂ ಇಡೀ ವಿಶ್ವ ಕ್ರಿಕೆಟ್ನ ಕಣ್ಣು ಇಂದು ರಾತ್ರಿ (ಅ.24) ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ನೆಟ್ಟಿದೆ. ಇದೇ ಸಂದರ್ಭದಲ್ಲಿ ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಕೆಲ ದಿನಗಳಷ್ಟೇ ತೆಗೆದುಕೊಂಡಿದ್ದ ಮಹತ್ವದ ನಿರ್ಧಾರ ಮತ್ತೆ ಮುನ್ನೆಲೆಗೆ ಬಂದಿದೆ.
ಏನಪ್ಪಾ ಆ ನಿರ್ಧಾರ ಅಂತಾ ನೋಡುವುದಾದರೆ, ಇಂದು ಇಂಡೋ-ಪಾಕ್ ಕ್ರಿಕೆಟ್ ಕದನ ನಡೆಯಲಿದೆ. ಹೀಗಾಗಿ ಸಾನಿಯಾ ಅವರಿಂದು ಇಡೀ ದಿನ ಸಾಮಾಜಿಕ ಜಾಲತಾಣಕ್ಕೆ ಪ್ರವೇಶವನ್ನೇ ನೀಡುವುದಿಲ್ಲವಂತೆ. ಒಂದು ದಿನದ ಮಟ್ಟಿಗೆ ಜಾಲತಾಣದಿಂದ ಮಾಯವಾಗುತ್ತಾರಂತೆ. ಸಾನಿಯಾರ ಈ ನಿರ್ಧಾರ ಹಿಂದಿನ ಉದ್ದೇಶವೇನು ಅಂತಾ ಯೋಚಿಸ್ತಿದ್ದೀರಾ? ಅದಕ್ಕೆ ಉತ್ತರ ಮುಂದೆ ಇದೆ ಓದಿ…
ಇಂಡೋ-ಪಾಕ್ ಕ್ರಿಕೆಟ್ ಕದನ ಅಂದ್ರೆ ಅದೊಂದು ನಿಜವಾದ ಯುದ್ಧದಂತೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಯಾರೇ ಗೆದ್ದರೂ? ಅಥವಾ ಯಾರೇ ಸೋತರು? ಪರಿಣಾಮ ಮಾತ್ರ ತೀವ್ರವಾಗಿರುತ್ತದೆ. ಗೆದ್ದರೆ ವಿಶ್ವಕಪ್ ಟ್ರೋಫಿ ಗೆದ್ದಷ್ಟೇ ಸಂಭ್ರಮಿಸುತ್ತಾರೆ. ಒಂದು ವೇಳೆ ಸೋತರೆ ಆಯಾ ದೇಶದ ಜನತೆಯ ಕೆಂಗಣ್ಣಿಗೆ ತಂಡಗಳು ಗುರಿಯಾಗುತ್ತವೆ. ಹೀಗಾಗಿ ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಎರಡು ತಂಡಗಳು ಕಾದಾಡುತ್ತವೆ.
ಸೋತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬ ಆಟಗಾರನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗುತ್ತದೆ. ಸಾನಿಯಾ ಮಿರ್ಜಾ ಮೊದಲೇ ಪಾಕ್ ಸೊಸೆ. ಭಾರತೀಯಳಾಗಿ ಪಾಕ್ ತಂಡದ ಮಾಜಿ ನಾಯಕ ಶೋಯೆಬ್ ಮಲ್ಲಿಕ್ರನ್ನು ಮದುವೆ ಆಗಿದ್ದಾರೆ. ಹೀಗಾಗಿ ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾನಿಯಾ ಅವರು ಅಡಕತ್ತರಿಯಲ್ಲಿ ಸಿಲುಕುತ್ತಾರೆ. ಹೀಗಾಗಿ ಪಂದ್ಯದ ಬಗ್ಗೆ ಏನೇ ಮಾತನಾಡಿದರೂ ವಿವಾದ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂದು ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿ ತಟಸ್ಥ ನಿಲುವು ತಾಳಲಿದ್ದಾರೆ.
ಮಿರ್ಜಾ ಈ ಹಿಂದೆ ನಡೆದ ಇಂಡೋ-ಪಾಕ್ ಕದನದ ವೇಳೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೇಲಿನ ವಿಷತ್ವವನ್ನು ಎದುರಿಸಿದ್ದರು. ಪಾಕಿಸ್ತಾನದ ಸೊಸೆ ಆಗಿರುವುದರಿಂದ ಸಹಜವಾಗಿಯೇ ಅವರ ಮೇಲೆ ವಿಷತ್ವ ಕಾರುವ ಸಾಧ್ಯತೆ ಇರುವುದರಿಂದ ಸಾಮಾಜಿಕ ಜಾಲತಾಣಕ್ಕೆ ಹೈವೋಲ್ಟೇಜ್ ಪಂದ್ಯದ ದಿನ ಗುಡ್ ಬೈ ಹೇಳುತ್ತಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ಸಾನಿಯಾ ಬರೆದುಕೊಂಡಿದ್ದಾರೆ. (ಏಜೆನ್ಸೀಸ್)
ಕಥೆ, ಪಾತ್ರ, ನಟನೆ, ಯಶಸ್ಸಿನ ಬಗ್ಗೆ…: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್ನಲ್ಲಿ ಸುದೀಪ್
ಬರ್ತಡೇ ಆಚರಣೆಗೆಂದು ಮೆಕ್ಸಿಕೋ ರೆಸ್ಟೋರೆಂಟ್ಗೆ ಹೋದ ಭಾರತೀಯ ಮೂಲದ ಟೆಕ್ಕಿ ದುರಂತ ಸಾವು!
ಉಪ್ರದಲ್ಲಿ ಗತವೈಭವ ಮರುಕಳಿಸುವರೇ ಪ್ರಿಯಾಂಕಾ?; ಜಾತಿ ರಾಜಕಾರಣ ಮೀರಿ ಮತ ಸೆಳೆಯಲು ಹೊಸ ತಂತ್ರಗಾರಿಕೆ