ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಕೆಜಿಎಫ್ ಚಾಪ್ಟರ್ 1 ಗಿಂತ ಚಾಪ್ಟರ್ 2 ಎಲ್ಲೆಡೆ ಅದ್ಧೂರಿ ಓಪನಿಂಗ್ ಪಡೆದುಕೊಂಡಿದ್ದು, ಎರಡೇ ದಿನಕ್ಕೆ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆದರೆ, ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಮಾಜಿ ಪೊಲೀಸ್ ಆಯುಕ್ತ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಅಸಮಾಧಾನವನ್ನು ಹೊರಹಾಕಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಾಸ್ಕರ್ ರಾವ್, ನಿಮ್ಮ ಸಿನಿಮಾ ಮತ್ತು ಹೀರೋ ಪ್ರಖ್ಯಾತಿ ಇರಬಹುದು. ಆದರೆ, ನಾನು ಈ ಸಿನಿಮಾವನ್ನು ಒಪ್ಪುವುದಿಲ್ಲ. ಸಿನಿಮಾದಲ್ಲಿ ಏನು ತೋರಿಸ್ತೀರಾ ನೀವು? ಬರೀ ರೌಡಿಸಂ ತೋರಿಸಿ ಸಮಾಜವನ್ನು ಹಾಳು ಮಾಡುತ್ತಿದ್ದೀರಾ? ಬರಿ ಮಚ್ಚು, ಇಷ್ಟುದ್ದ ಗಡ್ಡ ಬಿಟ್ಕೊಂಡು, ಬೆವತುಕೊಂಡು, ಒಂದು ರೀತಿಯಲ್ಲಿ ವರ್ಕೌಟ್ ಮಾಡಿ ಅಸಹ್ಯ ರೀತಿಯಲ್ಲಿ ತೋರಿಸುತ್ತೀರಾ, ಏನಾದರೂ ಒಂದು ಸಾಧನೆ ತೋರಿಸಿ ಎಂದು ಹೆಸರೇಳದೆ ಪರೋಕ್ಷವಾಗಿ ಕೆಜಿಎಫ್-2 ಚಿತ್ರವನ್ನು ಟೀಕಿಸಿದರು. ಅಲ್ಲದೆ, ಇಂತಹ ಸಿನಿಮಾ ಕನ್ನಡದ ಹೆಮ್ಮೆಯಲ್ಲ ಎಂದು ಹೇಳಿದರು.
ನಾನು ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿರುವಾಗ ದಂಡುಪಾಳ್ಯ ಗ್ಯಾಂಗ್ನ ಹಾವಳಿ ಹೆಚ್ಚಾಗಿತ್ತು. ಬೆಂಗಳೂರು ರೇಂಜ್ ಐಜಿ ಆಗಿದ್ದ ಸಮಯದಲ್ಲಿ ದಂಡುಪಾಳ್ಯ ಗ್ಯಾಂಗ್ ಬಗ್ಗೆ ಒಂದು ಸಿನಿಮಾ ಮಾಡಿದರು. ನಮಗೆಲ್ಲ ಆಹ್ವಾನ ನೀಡಿದ್ದರು. ನಮ್ಮ ಸಹೋದ್ಯೋಗಿಗಳನ್ನು ಕರೆದುಕೊಂಡು ಸಿನಿಮಾ ನೋಡಲು ಹೋಗಿದ್ದೆ. ಸಿನಿಮಾ ನೋಡುತ್ತಿರುವಾಗಲೇ ನಮ್ಮ ದೊಡ್ಡಬಳ್ಳಾಪುರದ ಡಿಎಸ್ಪಿ ಯಾವುದೋ ಕೊಲೆಯಾಗಿದೆ ನಾನು ಈಗ ತೆರಳಬೇಕಿದೆ ಎಂದು ಹೋದರು. ಯಾರೋ ಇಬ್ಬರು ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲೇ ಕೊಲೆ ಮಾಡಿದ್ದಾರೆ ಎಂದು ಹೇಳಿದರು. ಚಿತ್ರದಲ್ಲಿ ರೌಡಿಸಂ ಅನ್ನು ವಿಜೃಂಭಣೆಯಿಂದ ತೋರಿಸಿದರೆ ಇನ್ನೇನಾಗುತ್ತದೆ ಎಂದು ಕಿಡಿಕಾರಿದರು.
ಏನಾದರೂ ಸಾಧನೆಗಳು ಇದ್ದರೆ ತೋರಿಸಿ. ಈವತ್ತು ಎಷ್ಟು ಜನ ನಮ್ಮವರು ಕಷ್ಟಪಟ್ಟು ಸಾಧನೆಯನ್ನು ಮಾಡಿದ್ದಾರೆ. ಬಡ ಕುಟುಂಬದಿಂದ ಬಂದು ಉನ್ನತ ಹುದ್ದೆಗಳನ್ನು ಏರಿದ್ದಾರೆ. ಸಾಮಾಜಿಕ ಸೇವೆ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಸಮಾಜದ ಎಲ್ಲ ತೊಡಕುಗಳನ್ನು ಎದುರಿಸಿ ಸಾಧನೆ ಮಾಡಿದ ಮಹನೀಯರ ಬಗ್ಗೆ ತೋರಿಸಿ. ಅದನ್ನು ಬಿಟ್ಟು ರೌಡಿಸಂ ಅನ್ನೇ ಹೀರೋಯಿಸಂ ರೀತಿ ತೋರಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.
ನಿಮ್ಮ ಸಿನಿಮಾ ಮತ್ತು ನಿಮ್ಮ ಹೀರೋ ಪ್ರಖ್ಯಾತಿ ಆಗಿರಬಹುದು. ಆದರೆ, ನಾನು ಇಂತಹ ಸಿನಿಮಾಗಳನ್ನು ನಿಜವಾಗಿಯು ಒಪ್ಪುವುದಿಲ್ಲ. ರೌಡಿಸಂ ಸಿನಿಮಾಗಳನ್ನು ನೀವು ಕೂಡ ಬೆಂಬಲಿಸಬೇಡಿ ಎಂದು ಅಭಿಮಾನಿಗಳ ಸಂಘಕ್ಕೂ ಮನವಿ ಮಾಡುತ್ತೇನೆ. ಏಕೆಂದರೆ, ಇಂತಹ ಸಿನಿಮಾಗಳಿಂದ ನೀವು ಕೂಡ ಹಾಳಾಗುತ್ತೀರಾ ಎಂದು ತಿಳಿ ಹೇಳಿದರು.
ನಾನು ಮಲಯಾಳಂ ಮತ್ತು ತಮಿಳು ಸಿನಿಮಾವನ್ನು ನೋಡುತ್ತೇನೆ. ಅದರಲ್ಲಿ ಏನಾದರೂ ಒಂದು ಸ್ಟೋರಿ ಇರುತ್ತದೆ. ಯಾವುದಾದರೂ ಒಂದು ಹಗರಣವನ್ನು ಬಯಲು ಮಾಡುವಂತಹ ಕತೆ ಇರುತ್ತದೆ. ಒಳ್ಳೆಯ ತನಿಖಾ ಚಿತ್ರಗಳು ಇರುತ್ತವೆ. ಇಂತಹ ಸಿನಿಮಾಗಳನ್ನು ಮಾಡುವುದರಿಂದ ಜನರಿಗೆ ಏನಾದರೂ ಕಲಿಯುತ್ತಾರೆ ಎಂದು ಹೇಳಿದರು.
ಮತ್ತೊಮ್ಮೆ ಸಾಮಾನ್ಯರ ಪಾಲಿನ ದೇವರಾದ ಸೂರ್ಯ: ಇದಲ್ಲವೇ ನಟನಿಗೆ ಇರಬೇಕಾದ ಸಾಮಾಜಿಕ ಕಳಕಳಿ
ಆಂಜನೇಯನ ಜನ್ಮ ಸ್ಥಳದಲ್ಲಿ ಹಿಂದುಗಳಿಗೆ ಟಿಕೆಟ್ ನೀಡದಿದ್ರೆ ಸೋಲು ಫಿಕ್ಸ್: ಕಾಂಗ್ರೆಸ್ನಲ್ಲೇ ಗೊಂದಲ ಶುರು
ಪ್ರೇಕ್ಷಕರು ಕೆಜಿಎಫ್ 2 ಅನ್ನೇ ಮರೆತುಬಿಡಬೇಕು.. ಪುಷ್ಪ ನಿರ್ದೇಶಕ ಸುಕುಮಾರ್ ಹಿಂದೆ ಬಿದ್ದ ಬನ್ನಿ ಫ್ಯಾನ್ಸ್