ಪಟನಾ: ಶಾಲಾ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವಾಗ ಕಾಂಡೋಮ್ ಪದ ಉಲ್ಲೇಖಿಸಿ, ಸರ್ಕಾರಕ್ಕೆ ಮುಜುಗರ ಉಂಟುಮಾಡಿದ ಮಹಿಳಾ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ವಿರುದ್ಧ ಕ್ರಮ ತೆಗೆದುಕೊಳ್ಳುವ ಸೂಚನೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ್ದಾರೆ.
ಸೆ.27 ರಂದು ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಅಧಿಕಾರಿ ನೀಡಿದ್ದ ಹೇಳಿಕೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಸ್ವತಃ ಅಧಿಕಾರಿಯೇ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು ಕ್ಷಮೆ ಕೋರಿದ್ದಾರೆ. ಆದರೂಮ ವಿಡಿಯೋ ಮಾತ್ರ ವೈರಲ್ ಆಗುತ್ತಲೇ ಇದೆ.
ಮಹಿಳಾ ಅಧಿಕಾರಿ ನೀಡಿದ ಹೇಳಿಕೆ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಹೊರಡಿಸಿರುವ ನೋಟಿಸ್ ಕುರಿತು ಪತ್ರಕರ್ತರು ಮಾಡಿದ ಪ್ರಶ್ನೆಗೆ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, ನ್ಯೂಸ್ ಪೇಪರ್ ಮೂಲಕ ಮಾಹಿತಿ ಗೊತ್ತಾದ ಬಳಿಕ ತನಿಖೆಗೆ ಆದೇಶಿಸಲಾಗಿದೆ. ರಾಜ್ಯದ ಮಹಿಳೆಯರಿಗೆ ಬೇಕಾದ ಎಲ್ಲ ನೆರವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕೆ ವಿರುದ್ಧವಾಗಿ ಮಹಿಳಾ ಅಧಿಕಾರಿ ನಡೆದುಕೊಂಡಿರುವುದು ಕಂಡುಬಂದರೆ ಖಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಿವಾದಿತ ಹೇಳಿಕೆ ನೀಡಿದ ಮಹಿಳಾ ಅಧಿಕಾರಿ ಭಮ್ರಾ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯಾಗಿದ್ದು, ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯೋಗದ ಮುಖ್ಯಸ್ಥರಾಗಿದ್ದಾರೆ. ಯುನಿಸೆಫ್ ಸಹಯೋಗದಲ್ಲಿ ರಾಜ್ಯ ಮಟ್ಟದ ಕಾರ್ಯಾಗರವನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವಾಗ ಭಮ್ರಾ ಅವರು ಎಡವಟ್ಟು ಮಾಡಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಉಚಿತ ಬೈಸಿಕಲ್ ಮತ್ತು ಶಾಲಾ ಸಮವಸ್ತ್ರಗಳನ್ನು ನೀಡುವ ಸರ್ಕಾರವು ಉಚಿತ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ನೀಡುವ ಬಗ್ಗೆಯೂ ಯೋಚಿಸಬೇಕು ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಭಮ್ರಾ ಅವರು ಇಂತಹ ಉಚಿತಗಳಿಗೆ ಮಿತಿಯಿಲ್ಲವೇ? ಈಗಾಗಲೇ ಸರ್ಕಾರ ಸಾಕಷ್ಟು ನೀಡಿದೆ. ಇಂದು ನೀವು ಉಚಿತವಾಗಿ ಒಂದು ಪಾಕೆಟ್ ನಾಪ್ಕಿನ್ ಕೇಳುತ್ತೀರಿ. ನಾಳೆ ಜೀನ್ಸ್ ಮತ್ತು ಶೂಗಳನ್ನು ಕೇಳಬಹುದು. ಕುಟುಂಬ ಯೋಜನೆಗೆ ಹಂತ ಬಂದಾಗ, ನೀವು ಉಚಿತ ಕಾಂಡೋಮ್ಗಳಿಗೂ ಬೇಡಿಕೆಯಿಡಬಹುದು ಎನ್ನುವ ಮೂಲಕ ವಿದ್ಯಾರ್ಥಿನಿಯರ ಎದುರೇ ಭಮ್ರಾ ಅವರು ನಾಲಿಗೆಯನ್ನು ಹರಿಬಿಟ್ಟಿದ್ದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಮಹಿಳಾ ಅಧಿಕಾರಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ಎಲ್ಲಿ ಏನು ಮಾತನಾಡಬೇಕು ಎಂಬುದು ಐಎಎಸ್ ಅಧಿಕಾರಿಗೆ ಗೊತ್ತಿಲ್ಲವೇ ಎಂದು ನೆಟ್ಟಿಗರು ಕಿಡಿಕಾರಿದ್ದರು. ಈ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸಹ ಅಧಿಕಾರಿಗೆ ನೋಟಿಸ್ ಹೊರಡಿಸಿದೆ. ತನ್ನ ತಪ್ಪಿನ ಅರಿವಾಗಿ ಮಹಿಳಾ ಅಧಿಕಾರಿಯು ಸಹ ಕ್ಷಮೆ ಕೋರಿದ್ದಾರೆ. (ಏಜೆನ್ಸೀಸ್)
ಪ್ರೀತಿಸಿ ಮದ್ವೆಯಾಗುವ ಮುನ್ನ ಯೋಚಿಸಿ… ಸೆಲ್ಫಿ ವಿಡಿಯೋದಲ್ಲಿ ಅತ್ತೆ ಮನೆಯವರ ಕೃತ್ಯ ನೆನೆದು ಯುವತಿ ಕಣ್ಣೀರು
ಸರ್ಕಾರಿ ಪ್ರಾಯೋಜಿತ ಬೈಕ್ ಸವಾರಿ ವೇಳೆ ದುರಂತ ಸಾವಿಗೀಡಾದ ಭಾರತದ ಖ್ಯಾತ ಯೂಟ್ಯೂಬರ್!