ಜೈಪುರ: ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ, ಪೋಸ್ಟ್ ಹಾಕಿದ್ದ ಹಿಂದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು, ಇಡೀ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಉದಯಪುರದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ. ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣದ ತನಿಖೆಯನ್ನು ಕೈಗೊಳ್ಳಲಿದೆ.
ಹಿಂದು ವ್ಯಕ್ತಿಯ ಕೊಲೆಯಿಂದಾಗಿ ಇಡೀ ರಾಜಸ್ಥಾನದಲ್ಲಿ ಆಕ್ರೋಶದ ಕಟ್ಟೆ ಹೊಡೆದಿದೆ. ಇಂದು ಹಿಂದುಪರ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಹಿಂದು ವ್ಯಕ್ತಿಯನ್ನು ಕೊಲೆ ಮಾಡಿರುವುದರ ಜೊತೆಗೆ ವಿಡಿಯೋವೊಂದನ್ನು ಹರಿಬಿಟ್ಟು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯ ವಿವರಣೆಗೆ ಬರುವುದಾದರೆ, ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಆಗಿ ಕೆಲಸ ಮಾಡುವ ಕನ್ನಯ್ಯ ಲಾಲ್ ಎಂಬಾತನನ್ನು ಅನ್ಯಧರ್ಮದ ಇಬ್ಬರು ದುಷ್ಕರ್ಮಿಗಳು ಮಂಗಳವಾರ ಬರ್ಬರವಾಗಿ ಕೊಂದಿದ್ದಾರೆ. ಗ್ರಾಹಕರ ಸೋಗಿನಲ್ಲಿ ಕನ್ನಯ್ಯ ಲಾಲ್ ಅಂಗಡಿಗೆ ತೆರಳಿದ ದುಷ್ಕರ್ಮಿಗಳು ಕನ್ನಯ್ಯರ ತಲೆಯನ್ನು ಕತ್ತರಿಸುವ ಮೂಲಕ ದುಷ್ಕೃತ್ಯ ಎಸಗಿದ್ದಾರೆ. ಕೊಲೆಗೆ ಕಾರಣ ಕನ್ನಯ್ಯ ತನ್ನ ಸಾಮಾಜಿಕ ಜಾಲತಾಣದಲ್ಲಿ ನೂಪರ್ ಶರ್ಮಾ ಪರ ಪೋಸ್ಟ್ ಹಾಕಿದ್ದು. ಆದರೆ, ಪೋಸ್ಟ್ ಹಾಕಿದ್ದು ಕನ್ನಯ್ಯ ಅಲ್ಲ. ಅವರ 18 ವರ್ಷದ ಮಗನೆಂದು ಹೇಳಲಾಗಿದೆ.
ಈ ಘಟನೆ ನಡೆಯುತ್ತಿದ್ದಂತೆ ರಾಜಸ್ಥಾನ ಮಾತ್ರವಲ್ಲ ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅನೇಕ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುವುದನ್ನು ಗಮನಿಸಿದ ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದಾರೆ. ಘಟನೆಯ ತನಿಖೆಗಾಗಿ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯನ ತಂಡವನ್ನು ಉದಯಪುರಕ್ಕೆ ಕಳುಹಿಸಿದೆ.
ಕೊಲೆ ಮಾಡಿದ ಬಳಿಕ ದುಷ್ಕರ್ಮಿಗಳು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಉದಯಪುರದ ಟೈಲರ್ ಅಂಗಡಿಯೊಂದಕ್ಕೆ ನುಗ್ಗುವ ಇಬ್ಬರು ವ್ಯಕ್ತಿಗಳು, ಚಾಕುವಿನಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರು ವ್ಯಕ್ತಿಗಳು ಪೋಸ್ಟ್ ಮಾಡಿದ ಪ್ರತ್ಯೇಕ ವಿಡಿಯೋದಲ್ಲಿ, ಇಬ್ಬರೂ ಕೊಲೆಯನ್ನು ಒಪ್ಪಿಕೊಂಡಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ದಾರೆ. ಜೂನ್ 17 ರಂದು ರೆಕಾರ್ಡ್ ಮಾಡಲಾದ ಮೂರನೇ ವಿಡಿಯೋ ಮಂಗಳವಾರದ ಕೊಲೆಯ ನಂತರ ಬಿಡುಗಡೆ ಮಾಡಲಾಯಿತು. ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ ಮಂಗಳವಾರ ಉದಯಪುರದಲ್ಲಿ ನಡೆದ ಕೃತ್ಯದ ಹಿಂದಿನ ಉದ್ದೇಶವನ್ನು ವಿವರಿಸಿದ್ದಾನೆ.
ಮಂಗಳವಾರ ರಾತ್ರಿಯೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜ್ಮಂದ್, ಉದಯಪುರದ ನೆರೆಯ ಜಿಲ್ಲೆ. ಬಂಧಿತ ಆರೋಪಿಗಳನ್ನು ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹಮದ್ ಎಂದು ಗುರುತಿಸಲಾಗಿದೆ.
ಭೀಕರ ಹತ್ಯೆಯ ನಂತರ ಉದಯಪುರದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ದಾಳಿಯ ವಿರುದ್ಧ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತ ಸರ್ಕಾರ ರಾಜ್ಯದಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಜಸ್ಥಾನದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ರಾಜ್ಯಾದ್ಯಂತ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡುವವರನ್ನು ಬಿಡುವುದಿಲ್ಲ ಎಂದು ರಾಜಸ್ಥಾನ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಉದಯಪುರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳು ಮತ್ತು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹತ್ಯೆಯನ್ನು ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ, ಉದಯಪುರದಾದ್ಯಂತ ಉದ್ವಿಗ್ನತೆ ಹೆಚ್ಚಾಗಿರುವುದರಿಂದ ಶಾಂತಿ ಕಾಪಾಡುವಂತೆ ಗೆಹ್ಲೋಟ್ ಮನವಿ ಮಾಡಿದರು.
ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದು, ಉದಯಪುರದಲ್ಲಿ ನಡೆದ ಘೋರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಕ್ರೌರ್ಯದಿಂದ ಭಯೋತ್ಪಾದನೆಯನ್ನು ಹರಡುವವರಿಗೆ ತಕ್ಷಣ ಶಿಕ್ಷೆಯಾಗಬೇಕು. ನಾವೆಲ್ಲರೂ ಒಟ್ಟಾಗಿ ದ್ವೇಷವನ್ನು ಸೋಲಿಸಬೇಕು. ದಯವಿಟ್ಟು ಎಲ್ಲರಿಗೂ ಮನವಿ ಮಾಡುವುದೇನೆಂದರೆ, ಶಾಂತಿ ಮತ್ತು ಸಹೋದರತ್ವ ಕಾಪಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. (ಏಜೆನ್ಸೀಸ್)
ಖ್ಯಾತ ನಟಿ ಮೀನಾ ಬಾಳಲ್ಲಿ ಬಡಿದ ಬರಸಿಡಿಲು: ಚೆನ್ನೈನಲ್ಲಿ ಕೊನೆಯುಸಿರೆಳೆದ ಪತಿ ವಿದ್ಯಾಸಾಗರ್
ಕೃಷಿ ಉತ್ಪನ್ನಕ್ಕೆ ರಫ್ತು ಬಲ: ಉತ್ಪನ್ನಗಳಿಗೆ ಪ್ರತ್ಯೇಕ ಬ್ರ್ಯಾಂಡಿಂಗ್, ಎಕ್ಸ್ಪೋರ್ಟ್ ಹಬ್ ಸ್ಥಾಪನೆ..