ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಲ್ಲಿನ ಬೀದಿ ಜಗಳದಿಂದ ಸುದ್ದಿಯಾಗಿದ್ದವರು ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್. ಬಳಿಕ ಇಬ್ಬರೂ ಎಂ.ಎಸ್. ರಾಜು ನಿರ್ದೇಶನದ ‘ಮತ್ತೆ ಮದುವೆ’ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿತ್ತು. ಪೋಸ್ಟರ್, ಟೀಸರ್ ಮೂಲಕ ಇಬ್ಬರ ಜೀವನದಲ್ಲಿ ನಡೆದ ಬೆಳವಣಿಗೆಗಳಿಗೇ ಸಿನಿಮಾ ರೂಪ ನೀಡಲಾಗಿದೆಯಾ ಎಂಬ ಅನುಮಾನ ಮೂಡಿಸಿತ್ತು. ಇತ್ತೀಚೆಗಷ್ಟೆ ರಿಲೀಸ್ ಆದ ಟ್ರೇಲರ್ ಆ ಅನುಮಾನವನ್ನು ಮತ್ತಷ್ಟು ಗಟ್ಟಿಯಾಗಿಸಿತ್ತು.
ಬುಧವಾರ (ಮೇ 17) ‘ಮತ್ತೆ ಮದುವೆ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ನರೇಶ್, ಪವಿತ್ರಾ ಜೋಡಿ ಆ ಅನುಮಾನಕ್ಕೆ ಇತಿಶ್ರೀ ಹಾಡಿದೆ. ಪವಿತ್ರಾ ಲೋಕೇಶ್, ‘ಯಾರೋ ನನ್ನ ಹೆಗಲ ಮೇಲೆ ಗನ್ ಇಟ್ಟು, ನರೇಶ್ ಅವರನ್ನು ಟಾರ್ಗೆಟ್ ಮಾಡಿದ್ದರು. ನನಗೆ ಹಣದ ಮೇಲೆ ಆಸೆಯಿಲ್ಲ. ಬೇರೆಯವರನ್ನು ದೋಚಬೇಕು ಅಂತಿಲ್ಲ. ನಡೆದ ಘಟನೆಗಳನ್ನು ಜೀರ್ಣಿಸಿಕೊಳ್ಳಲು ತುಂಬ ಸಮಯ ಬೇಕಾಯಿತು’ ಎಂದರೆ.
ಇದನ್ನೂ ಓದಿ:ಸೀಮೆಬದನೆ ರೂಪದ ಮಾವಿನ ಹಣ್ಣು! ಉಡುಪಿಯಲ್ಲಿ ಪ್ರಕೃತಿ ವೈಚಿತ್ರ್ಯ ಪತ್ತೆ…
ಇನ್ನು ನರೇಶ್, ‘ಇದು ನಮ್ಮ ಜೀವನದ ಕುರಿತ ಸಿನಿಮಾನ ಅಥವಾ ಅಲ್ಲವಾ? ಎಂಬುದು ನಿಮಗೆ ಸಿನಿಮಾ ನೋಡಿದ ಬಳಿಕ ಗೊತ್ತಾಗಲಿದೆ. ಇನ್ನು ನಾವು ಮದುವೆಯಾಗಿದ್ದೀವಾ ಅಂತ ಕೇಳಿದರೆ? ಮದುವೆ ಅಂದರೇನು? ತಾಳಿ, ಉಂಗುರ, ಅವೆಲ್ಲ ಸಾಂಕೇತಿಕ. ನನ್ನ ಪ್ರಕಾರ ಎರಡು ಹೃದಯಗಳು ಸೇರಿದರೆ ಮದುವೆ. ನಾವಿಬ್ಬರೂ ಜತೆಯಾಗಿ ವಾಸಿಸುತ್ತಿದ್ದೇವೆ, ಖುಷಿಯಾಗಿದ್ದೇವೆ…’ ಎಂದರು.