ನವದೆಹಲಿ: ದೇಶದಲ್ಲಿ 2018-19ನೇ ಸಾಲಿನಲ್ಲಿ ಭತ್ತ ಬೆಳೆದ ರೈತರ ಪೈಕಿ ಶೇ. 12 ರೈತರಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ದೊರೆತಿದೆ. ದೇಶಾದ್ಯಂತ 8 ಕೋಟಿಗೂ ಅಧಿಕ ರೈತರು ಭತ್ತ ಬೆಳೆಯುತ್ತಿದ್ದು, ಅದರಲ್ಲಿ 97 ಲಕ್ಷ ರೈತರು ಮಾತ್ರ ಎಂಎಸ್ಪಿ ಪಡೆದುಕೊಂಡಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಎಂಎಸ್ಪಿ ಪಡೆದುಕೊಂಡಿವೆ. ಪಂಜಾಬ್ನ ಶೇ. 95 ಭತ್ತ ಬೆಳೆಗಾರರು ಮತ್ತು ಹರಿಯಾಣದ ಶೇ. 70 ಬೆಳೆಗಾರರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪಶ್ಚಿಮ ಬಂಗಾಳದ ಶೇ. 7.3 ರೈತರು, ಉತ್ತರ ಪ್ರದೇಶದ ಶೇ. 3.6 ರೈತರು, ಒಡಿಶಾದ ಶೇ. 20.6 ರೈತರು ಮತ್ತು ಬಿಹಾರದ ಶೇ. 1.7 ರೈತರು ಎಂಎಸ್ಪಿ ಲಾಭ ಪಡೆದಿದ್ದಾರೆ.
ಇದನ್ನೂ ಓದಿ: ಪರಸ್ಪರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೆ.ಕಲ್ಯಾಣ್ ದಂಪತಿ; ಶೀಘ್ರದಲ್ಲೇ ವಿಡಿಯೋ ಬಿಡುಗಡೆ ಮಾಡ್ತಾರಂತೆ…!
ಪಂಜಾಬ್ ಮತ್ತು ಹರಿಯಾಣದಲ್ಲಿ ಹೆಚ್ಚಿನ ಫಲಾನುಭವಿಗಳಿರುವ ಕಾರಣದಿಂದಲೇ ಈ ಎರಡೂ ರಾಜ್ಯಗಳಲ್ಲಿ ಇದೀಗ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ಹೆಚ್ಚಿದೆ. ಹಲವು ರಾಜ್ಯಗಳಲ್ಲಿ ಸಣ್ಣ ಪ್ರಮಾಣದ ರೈತರು ಹೆಚ್ಚಿದ್ದು, ಅವರಿಗೆ ಕನಿಷ್ಠ ಬೆಂಬಲ ಬೆಲೆ ಪಡೆಯುವುದಕ್ಕೆ ಅವಕಾಶಗಳು ಸಿಗುತ್ತಿಲ್ಲ.
ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಮುಂಗಾರು ಬೆಳೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ರೈತರು ಎಂಎಸ್ಪಿಗಿಂತ ಕಡಿಮೆ ಬೆಲೆಯಲ್ಲಿ ಬೆಳೆ ಮಾರಾಟ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವಾಲಯದ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ತಿಳಿಸಿದೆ. (ಏಜೆನ್ಸೀಸ್)