ಬೆಂಗಳೂರು: ರಾಜ್ಯದಲ್ಲಿ ನಂದಿನಿ Vs ಅಮುಲ್ ಚರ್ಚೆ ನಡೆಯುತ್ತಿದ್ದು ಈ ಬಗ್ಗೆ ರಾಜಕೀಯ ನಾಯಕರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಇದೀಗ ಆರೋಗ್ಯ ಸಚಿವ ಸುಧಾಕರ್ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಸಚಿವರು ಹೇಳಿದ್ದೇನು?
ಈ ಸಂದರ್ಭ ಮಾತನಾಡಿದ ಸಚಿವರು “ಹೈನುಗಾರರಿಗೆ ಹಾಲು ಉತ್ಪಾದನೆ ಮಾಡಿದ್ದಕ್ಕೆ ಪ್ರೋತ್ಸಾಹ ಧನ ಕೊಟ್ಟಿದ್ದರೆ ಅದು ಬಿಜೆಪಿ ಸರ್ಕಾರ. ಪ್ರತಿ ಲೀಟರ್ ಗೆ 5 ರೂ. ಪ್ರೋತ್ಸಾಹ ಧನ ಕೊಡಲಾಗಿದೆ. ಕೆಎಂಎಫ್ ಆದಾಯದಲ್ಲಿ ಒಂದು ಪಾಲನ್ನು ಹಾಲು ಉತ್ಪಾದಕರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಆಮದು ಮಾಡಲೂ ಅವಕಾಶ ಇದೆ. ಆದರೆ ಇದಕ್ಕೆ ಅಡ್ಡಿ ಮಾಡಿರುವುದೇ ಯುಪಿಎ ಸರ್ಕಾರ.
ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ?
ನಂದಿನಿ ಹಾಲನ್ನ ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ ಸೇನೆ, ತಿರುಪತಿ ತಿರುಮಲ,ಮಹಾರಾಷ್ಟ್ರಗೆ ನಮ್ಮ ಹಾಲು ಹೋಗುತ್ತಿದೆ. ದೆಹಲಿಗೂ ಹೋಗಲು ಪ್ರಯತ್ನ ನಡೆದಿದೆ. ಹೆರಿಟೇಜ್, ದೊಡ್ಲಾ, ಆರೋಕ್ಯ ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ಹಾಲನ್ನು ಹಿಂದಿನಿಂದಲೂ ಮಾರುತ್ತಿದ್ದಾರೆ.
ಅಮುಲ್ ಅಂದ್ರೆ ಬಿಜೆಪಿ… ನಂದಿನಿ ಅಂದ್ರೆ ಕಾಂಗ್ರೆಸ್ಸಾ..? ಇದೆಲ್ಲ ಬಿಡಬೇಕು.. ಕಾಮಾಲೆ ಕಣ್ಣಿನಿಂದ ನೋಡೋದನ್ನ ಬಿಡಿ. ಈಗಾಗಲೇ ಪಾತಾಳಕ್ಕೆ ಕಚ್ಚಿದ್ದೀರಿ. ಅಪಹಾಸ್ಯಕ್ಕೆ ಈಡಾಗಬೇಡಿ.” ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.