ರಾಂಚಿ: ಚೆನ್ನೈ ಸೂಪರ್ಕಿಂಗ್ಸ್ ಸಾರಥ್ಯ ವಹಿಸಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ರಾಂಚಿಯಲ್ಲಿ ಕರೊನಾ ಪರೀಕ್ಷೆಗೆ ಒಳಪಟ್ಟಿದ್ದು, ನೆಗೆಟಿವ್ ವರದಿ ಬಂದಿದೆ. ಇದರಿಂದ ಅವರು ಶುಕ್ರವಾರ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಂಚಿಯವರೇ ಆದ ಸಿಎಸ್ಕೆಯ ಮತ್ತೋರ್ವ ಆಟಗಾರ ಮೋನುಕುಮಾರ್ ಕೂಡ ಧೋನಿಗೆ ಜತೆಗೆ ಬುಧವಾರ ಕರೊನಾ ಪರೀಕ್ಷೆ ಎದುರಿಸಿದ್ದರು. ಸ್ಥಳೀಯ ಆಸ್ಪತ್ರೆ ವೈದ್ಯರು ಧೋನಿ ಅವರ ಫಾರ್ಮ್ಹೌಸ್ಗೆ ತೆರಳಿ ಸ್ಯಾಂಪಲ್ ಪಡೆದುಕೊಂಡಿದ್ದರು ಎನ್ನಲಾಗಿದೆ.
ಸಿಎಸ್ಕೆ ಶಿಬಿರಕ್ಕೆ ಜಡೇಜಾ ಗೈರು
ಆಲ್ರೌಂಡರ್ ರವೀಂದ್ರ ಜಡೇಜಾ ಚೆನ್ನೈನಲ್ಲಿ ಆಗಸ್ಟ್ 15ರಿಂದ 20ರವರೆಗೆ ನಡೆಯಲಿರುವ ಚೆನ್ನೈ ಸೂಪರ್ಕಿಂಗ್ಸ್ ತಂಡದ ತರಬೇತಿ ಶಿಬಿರದಿಂದ ಹೊರಗುಳಿಯಲಿದ್ದಾರೆ. ಅವರು ವೈಯಕ್ತಿಕ ಕಾರಣದಿಂದಾಗಿ ಶಿಬಿರಕ್ಕೆ ಲಭ್ಯರಾಗುತ್ತಿಲ್ಲ ಎನ್ನಲಾಗಿದೆ. ಉಳಿದಂತೆ ತಂಡದ ಪ್ರಮುಖ ಆಟಗಾರರಾದ ಎಂಎಸ್ ಧೋನಿ, ಸುರೇಶ್ ರೈನಾ, ಹರ್ಭಜನ್ ಸಿಂಗ್, ಅಂಬಟಿ ರಾಯುಡು ಮತ್ತಿತರರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಚೆಂಡಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಫೀಲ್ಡರ್ಸ್, ಟ್ರೋಲ್ ಮಾಡಿದ ರಮೀಜ್ ರಾಜಾ..!
ಸಿಎಸ್ಕೆ ತಂಡ ಆಗಸ್ಟ್ 21ರಂದು ದುಬೈಗೆ ವಿಮಾನ ಏರುವ ಮುನ್ನ ಜಡೇಜಾ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ. ತಂಡದ ಬೌಲಿಂಗ್ ಕೋಚ್ ಎಲ್. ಬಾಲಾಜಿ ಶಿಬಿರದ ಮೇಲ್ವಿಚಾರಣೆ ವಹಿಸಿಕೊಳ್ಳಲಿದ್ದಾರೆ. ಶಿಬಿರಕ್ಕೆ ತಮಿಳುನಾಡು ಸರ್ಕಾರದಿಂದ ಲಿಖಿತ ಅನುಮತಿ ಲಭಿಸಿರುವುದನ್ನು ಸಿಎಸ್ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದಾರೆ. ತಂಡದ ಮುಖ್ಯ ಕೋಚ್ ಸ್ಟೀನ್ ಫ್ಲೆಮಿಂಗ್ ಮತ್ತು ಸಹಾಯಕ ಕೋಚ್ ಮೈಕೆಲ್ ಹಸ್ಸೆ ಆಗಸ್ಟ್ 22ರಂದು ದುಬೈನಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಕೊಹ್ಲಿಯನ್ನು ಸಿಂಹಕ್ಕೆ ಹೋಲಿಸಿದಕ್ಕೆ ಆರ್ಸಿಬಿ ಕಾಲೆಳೆದ ಸಿಎಸ್ಕೆ…!