ಭೋಪಾಲ್: ಕೊಲೆಗಾರ ಎಷ್ಟೇ ಚಾಣಾಕ್ಷನಾದರೂ ಒಂದಲ್ಲ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ ಎಂಬ ಮಾತಿಗೆ ಮಧ್ಯಪ್ರದೇಶದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಗಂಡನ ಕೊಲೆ ಪ್ರಕರಣದಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಸಹಾಯದಿಂದ ದುಷ್ಟ ಪತ್ನಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಈ ಘಟನೆ ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡುವುದು ಮತ್ತು ಮೃತದೇಹವನ್ನು ವಿಲೇವಾರಿ ಮಾಡುವುದು ಹೇಗೆ ಎಂದು ಇಂಟರ್ನೆಟ್ನಲ್ಲಿ ಸರ್ಚ್ ಮಾಡಿ, ಪ್ರಿಯಕರನ ಸಹಾಯದಿಂದ ಗಂಡನ ಕೊಲೆ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಪತ್ನಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.
ಘಟನೆಯ ವಿವರಣೆಗೆ ಬರುವುದಾದರೆ, ಹರ್ದಾ ಜಿಲ್ಲೆಯ ಖೇಡಿಪುರ್ ಏರಿಯಾದ ತಬಸ್ಸುಮ್ ಜೂನ್ 18ರಂದು ತನ್ನ ಗಂಡ ಅಮೀರ್ ಮೃತಪಟ್ಟಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ ಕೊಲೆಯ ಹಿಂದೆ ದರೋಡೆ ಕಾರಣ ಇರಬಹುದು ಎಂದು ತನಿಖಾಗಾರರು ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಸ್ಥಳದಲ್ಲಿ ಸಿಕ್ಕಂತಹ ಸಾಕ್ಷ್ಯಾಗಳನ್ನು ಪರೀಕ್ಷಿಸಿದಾಗ ಕೊಲೆಯಲ್ಲಿ ಪತ್ನಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು.
ಇದಾದ ಬಳಿಕ ತನಿಖಾಗಾರರು ತಬಸ್ಸುಮ್ ಕಾಲ್ ಡಿಟೇಲ್ಸ್ ತೆಗೆದುಕೊಂಡು ಪರೀಕ್ಷಿಸಿದರು. ಈ ವೇಳೆ ಆಕೆ ಇರ್ಫಾನ್ ಎಂಬಾತನ ಜತೆ ನಿರಂತರ ಸಂಪರ್ಕದಲ್ಲಿರುವುದು ತಿಳಿದಿದೆ ಮತ್ತು ತನಿಖೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದಾದ ಬಳಿಕ ಪೊಲೀಸರು ತಬಸ್ಸುಮ್ ಇಂಟರ್ನೆಟ್ ಸರ್ಚ್ ಹಿಸ್ಟರಿಯನ್ನು ಪರಿಶೀಲಿಸಿದಾಗ ಭಯಾನಕ ಅಂಶಗಳು ಹೊರಬಿದ್ದಿವೆ. ಕೊಲೆ ಮಾಡುವ ವಿಧಾನಗಳು, ಕಾಲ ಮತ್ತು ಕೈಗಳನ್ನು ಕಟ್ಟಿಹಾಕುವ ಬಗೆ ಮತ್ತು ಮೃತದೇಹವನ್ನು ಹೇಗೆ ವಿಲೇವಾರಿ ಮಾಡಬೇಕೆಂದು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾಳೆ.
ಈ ಎಲ್ಲ ಅಂಶಗಳ ಆಧಾರದ ಮೇಲೆ ತನಿಖಾಗಾರರ ತಬಸ್ಸುಮ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಿಯಕರ ಇರ್ಫಾನ್ ಜತೆಗೂಡಿ ಗಂಡ ಅಮೀರ್ನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕೊಲೆಯಾದ ಅಮೀರ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದ. ತಬಸ್ಸುಮ್, ಇರ್ಫಾನ್ ಜತೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದಳು. ಮಹಾರಾಷ್ಟ್ರದಿಂದ ಮರಳಿದ ಅಮೀರ್ ಇಬ್ಬರ ನಡುವಿನ ಸಂಬಂಧಕ್ಕೆ ಅಡ್ಡಗೋಡೆಯಾಗಿದ್ದ. ಇರ್ಫಾನ್ ಮತ್ತು ತಬಸ್ಸುಮ್ ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡುವ ನಿರ್ಧಾರಕ್ಕೆ ಇಬ್ಬರು ಬಂದಿದ್ದರು. ಆ ನಂತರವೇ ತಬಸ್ಸುಮ್ ಹೇಗೆ ಕೊಲೆ ಮಾಡುವುದೆಂದು ಇಂಟರ್ನೆಟ್ನಲ್ಲಿ ಹುಡುಕಾಡಿದ್ದಳು.
ಇನ್ನು ಅಮೀರ್ಗೆ ಅಸ್ತಮಾ ಇತ್ತು. ಅದನ್ನೆ ಬಂಡವಾಳ ಮಾಡಿಕೊಂಡ ತಬಸ್ಸುಮ್, ಅಸ್ತಮಾ ಔಷಧಿಗಳೊಂದಿಗೆ ಇತರೆ ಔಷಧಿಗಳನ್ನು ಬದಲಾಯಿಸಿದ್ದಳು. ಪತ್ನಿಯ ನಿಜ ಸ್ವರೂಪ ಅರಿಯದ ಅಮೀರ್ ಎಂದಿನಂತೆಯೇ ಔಷಧಿಗಳನ್ನು ಸೇವಿಸಿ, ಪ್ರಜ್ಞೆ ತಪ್ಪಿ ಬಿದಿದ್ದನ್ನು. ಬಳಿಕ ಮನೆಗೆ ಬಂದ ಪ್ರಿಯಕರ ಇರ್ಫಾನ್, ತಬಸ್ಸುಮ್ ಜತೆಗೂಡಿ ಅಮೀರ್ ಕೈ-ಕಾಲುಗಳನ್ನು ಕಟ್ಟಿ ಅಮಿರ್ ಸಾಯುವವರೆಗೂ ಇರ್ಫಾನ್ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. (ಏಜೆನ್ಸೀಸ್)
ಹಿಂದುಳಿದ ಸಮುದಾಯಗಳ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ NEET ಮಾರಕ: ನಟ ಸೂರ್ಯ
VIDEO| ಬ್ಯೂಟಿಗೆ ಬೋಲ್ಡ್ ಆದ ಕಾಮೆಂಟೇಟರ್: ಜೂಮ್ ಮಾಡಿದ ಜಾಗದ ಬಗ್ಗೆ ನೆಟ್ಟಿಗರ ತೀವ್ರ ಆಕ್ಷೇಪ!