ಹೊನ್ನಾವರ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿ ಮತ್ತು 18 ಗೂಳಿಯನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ತಾಲೂಕಿನ ಹಳದಿಪುರದ ಬಡಗಣಿ ಬ್ರಿಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ನಡೆದಿದೆ.
ಹಾಸನ ಜಿಲ್ಲೆ ಹೊಳೆನರಸಿಪುರದ ಕಂಟೆನರ್ ಚಾಲಕ ಸಯ್ಯದ್ ರಿಜ್ವಾನ್, ಸಲ್ಮಾನ್ ಝಮ್ರದ್ ಖಾನ್ ಬಂಧಿತರು. ಮಂಡ್ಯ ಜಿಲ್ಲೆ ನಾಗಮಂಗಲದ ಸೋಮಶೇಖರ್ ಎ.ಬಿ. ಬೊರೇಗೌಡ, ಭಟ್ಕಳದ ಮಹಮದ್ ಸಿಯಾಮ್ ತಪ್ಪಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದಿಂದ ಭಟ್ಕಳ ಕಡೆಗೆ ಜಾನುವಾರು ಸಾಗಿಸಲಾಗುತ್ತಿತ್ತು. ಸರಿಯಾದ ಗಾಳಿ ಬೆಳಕು ಇರುವ ಕಂಪಾರ್ಟ್ಮೆಂಟ್, ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ ಹಿಂಸಾತ್ಮಕವಾಗಿ ತುಂಬಿಕೊಂಡು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶಕ್ಕೆ ಸಾಗಿಸುತ್ತಿದ್ದರು ಎನ್ನಲಾಗಿದೆ. 18 ಗೂಳಿ ಪತ್ತೆಯಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.