ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಸೋಮವಾರ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಲ್ಲಿಯ ಅವ್ಯವಸ್ಥೆ ವಿರುದ್ಧ ಗರಂ ಆದರ ಅವರು,ಕನಿಷ್ಠ ಶೌಚಗೃಹ ವ್ಯವಸ್ಥೆ ಇಲ್ಲದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ 64 ರೋಗಿಗಳಿಗೆ ಆರು ನೂರಕ್ಕೂ ಹೆಚ್ಚು ಬಾರಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ರೋಗಿಗಳಿಗೆ ಕೊಡಬೇಕಿರುವ ಎರಡು ಅತಿ ಮುಖ್ಯಔಷಧಗಳು ಪೂರೈಕೆ ಆಗುತ್ತಿಲ್ಲ. ಈ ಔಷಧಗಳನ್ನು ಮೂರು ದಿನದೊಳಗೆ ಸರಿಪಡಿಸಬೇಕು ಎಂದು ಸೂಚಿಸಿದರು.
ಇಲ್ಲಿ ಅವ್ಯವಸ್ಥೆಗಳನ್ನು ವಾರದೊಳಗೆ ಸರಿಪಡಿಸಿ,ಕೇಂದ್ರ ನಿರ್ವಹಣೆಯ ಹೊರಗುತ್ತಿಗೆ ಪಡೆದಿರುವ ಏಜನ್ಸಿ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಕರೆಯ ಬೇಕೆಂದು ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ ಅವರಿಗೆ ಸೂಚಿಸಿದರು. ಈ ವೇಳೆ ಅನೇಕ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡರು.