ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕಳೆದೆರಡು ದಿನಗಳಿಂದ ಯಾವಮಟ್ಟಿಗೆ ಮಳೆಯಾಗುತ್ತಿದೆ ಎಂದರೆ, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಕೆಲವೆಡೆ ಮಳೆ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದ್ದು ಲೈನ್ ಮ್ಯಾನ್ಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಲೈನ್ ಮ್ಯಾನ್ ಒಬ್ಬರು ಧೈರ್ಯದಿಂದ ಮಾಡಿದ್ದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಈ ಲೈನ್ ಮ್ಯಾನ್, ನೆರೆ ನೀರಿನಲ್ಲಿ ಎದೆ ಮಟ್ಟದ ತನಕ ಮುಳುಗಿದ್ದರೂ ವಿದ್ಯುತ್ ತಂತಿ ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಘಟನೆ ಮಂಗಳೂರಿನ ಹೊರ ವಲಯದ ದೇರಳಕಟ್ಟೆಯಲ್ಲಿ ನಡೆದಿದೆ.
ಇಂದು ಭಾರೀ ಮಳೆಗೆ ವಿದ್ಯುತ್ ಕೈಕೊಟ್ಟು 40ರಷ್ಟು ಮನೆಗಳಿಗೆ ಕರೆಂಟ್ ಇಲ್ಲದಾಗಿತ್ತು. ಅದಲ್ಲದೇ ವಿದ್ಯುತ್ ಕಂಬದ ಸುತ್ತ ಎದೆ ಮಟ್ಟಕ್ಕೆ ನೀರು ನಿಂತಿದ್ದರಿಂದ ರಿಪೇರಿ ಕಾರ್ಯಕ್ಕೆ ಇಳಿಯುವವರಿಗೆ ಶಾಕ್ ಹೊಡೆಯುವ ಅಪಾಯ ಇತ್ತು. ಆದರೂ ಜನರ ಮನೆಗಳಿಗೆ ವಿದ್ಯುತ್ ತಲುಪಲಿ ಎನ್ನುವ ಉದ್ದೇಶದಿಂದ ಧೈರ್ಯದಿಂದ ಇವರು ನೀರಿನಲ್ಲೇ ಹೋಗಿ ವಿದ್ಯುತ್ ತಂತಿ ಸರಿಪಡಿಸಿದ್ದಾರೆ. ಮೆಸ್ಕಾಂ ಸಿಬಂದಿಯ ಕಾರ್ಯ ತತ್ಪರತೆಗೆ ಸಾರ್ವಜನಿಕರು ಪ್ರಶಂಸಿದ್ದಾರೆ.