ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ವಿಚಾರ, ಸರ್ಕಾರ ರಚನೆ ಆಗುವ ಹಿಂದಿನಿಂದಲೂ ಕೇಳಿಬರುತ್ತಿದೆ. ಇದೀಗ ಸದನದಲ್ಲ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವ ವಿಚಾರ ಪ್ರಸ್ತಾಪ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ವಿರೋಧಿಸಲು ಶುರುಮಾಡಿದ್ದಾರೆ.
ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಬಿಜೆಪಿ
ಈ ಸಂದರ್ಭ ಪರಿಷತ್ನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ವಿಚಾರವಾಗಿ ಆಡಳಿತ- ವಿಪಕ್ಷ ನಡುವೆ ಜಟಾಪಟಿ ನಡೆದಿದ್ದು ಸದನದ ಬಾವಿಗಿಳಿದು ಬಿಜೆಪಿ ಪ್ರತಿಭಟನೆ ನಡೆಸಿದೆ.
ಈ ಸಂದರ್ಭ ರಾಮಲಿಂಗಾರೆಡ್ಡಿ ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದ್ದು “ದೇಶದಿಂದ ಅತಿ ಹೆಚ್ಚಿನ ಗೋ ಮಾಂಸ ರಫ್ತಾಗುತ್ತಿದೆ. ಮೊದಲು ಅದಕ್ಕೆ ಉತ್ತರ ನೀಡಿ. ಗೋವಾದಿಂದ ಗೋ ಮಾಂಸ ರಫ್ತಾಗುತ್ತಿದೆ. ಮೊದಲು ಅದಕ್ಕೆ ಕಡಿವಾಣ ಹಾಕಿ” ಎಂದು ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ಪಶುಸಂಗೋಪನಾ ಸಚಿವರ ಹಳೆ ಹೇಳಿಕೆ ಮತ್ತೆ ಮುನ್ನೆಲೆಗೆ….
ಈ ಸಂದರ್ಭದಲ್ಲ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, “ಗೋ ಹತ್ಯೆ ನಿಷೇಧ ವಿಧೇಯಕ ಹಿಂಪಡೆಯುವ ವಿಚಾರ ಸರ್ಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಇಲ್ಲ ಅಂತ ಹೇಳಿದ್ದಾರೆ. ಆದರೆ ಮೈಸೂರಿನಲ್ಲಿ ಇದೇ ಸಚಿವರು ಎಮ್ಮೆ ಕೋಣಗಳನ್ನ ಕಡಿಯುವುದಾದರೆ ಗೋವುಗಳನ್ನ ಯಾಕೆ ಕಡಿಯಬಾರದು ಹೇಳಿಕೆ ನೀಡಿದ್ದೀರಿ.
ಈಗ ಆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಅಂತ ಹೇಳಿದ್ದಾರೆ. ಜವಾಬ್ದಾರಿಯುತ ಪಶುಸಂಗೋಪನಾ ಸಚಿವರೇ ಈ ರೀತಿ ಹೇಳಿಕೆ ನೀಡಿದ್ದಾರೆ. ಸದನಕ್ಕೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದಿದ್ದಾರೆ.
ಪಶುಸಂಗೋಪನಾ ಸಚಿವರ ಸ್ಪಷ್ಟನೆ ಇಂತಿದೆ…
ಅದಕ್ಕೆ ಪಶು ಸಂಗೋಪನಾ ಸಚಿವ ವೆಂಕಟೇಶ್ “ನಾನು ಈಗಾಗಲೇ ಆ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಸದ್ಯಕ್ಕೆ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ ಸರ್ಕಾರದ ಮುಂದಿಲ್ಲ” ಎಂದಿದ್ದಾರೆ.
ಕಲಾಪ ಮುಂದೂಡಿಕೆ…
ಈ ಸಂದರ್ಭ ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಾ ಧರಣಿ ನಡೆಸಿದ್ದಾರೆ. ಬಿಜೆಪಿ ಕಾಂಗ್ರೆಸ್ ಸದಸ್ಯರ ಗದ್ದಲ ಹಿನ್ನೆಲೆಯಲ್ಲಿ ಪರಿಷತ್ ಕಲಾಪ ಮದ್ಯಾಹ್ನ ಮೂರು ಗಂಟೆಗೆ ಮುಂದೂಡಿಕೆಯಾಗಿದೆ.