ಬೆಂಗಳೂರು: ಸದನದಲ್ಲಿ ಇದೀಗ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ನಡೆಯುತ್ತಿರುವ ಅಪಘಾತಗಳ ಬಗ್ಗೆಯೂ ಪ್ರಸ್ತಾಪ ಆಗಿದೆ. ಜೆಡಿಎಸ್ ಶಾಸಕ ಮರಿತಿಬ್ಬೇಗೌಡ, ಈ ಕುರಿತಾಗಿ ಪ್ರಶ್ನಿಸಿದ್ದು ಲೋಕೋಪಯೋಗಿ ಖಾತೆ ಸಚಿವ ಸತಿಶ್ ಜಾರಕಿಹೊಳಿ ಉತ್ತರಿಸಿದ್ದಾರೆ.
ಜೆಡಿಎಸ್ನ ಮರಿತಿಬ್ಬೇಗೌಡ, “ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇಲಾಲಿಯವರೆಗೂ 512 ಅಪಘಾತವಾಗಿದೆ. 123 ಮರಣ ಆಗಿದೆ. 585 ಮಂದಿ ಗಾಯಗೊಂಡಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿಯಲ್ಲ, ಸಾವಿನ ಹೆದ್ದಾರಿಯಾಗಿದೆ. ಇಲ್ಲಿ ಯಾವುದೇ ಸುರಕ್ಷಾ ಕ್ರಮ ಇಲ್ಲ. ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಗ್ಯಾರಂಟಿ ಕದನ: ನಿಲುವಳಿ ಕುರಿತು ಚರ್ಚೆಗೆ ಪಟ್ಟು; ಕೈ ವಿರುದ್ಧ ಬಿಜೆಪಿ ಹೋರಾಟ
ಅದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ “ಖಂಡಿತವಾಗಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡ್ತೀವಿ. ಈಗಾಗಲೇ ನಮ್ಮ ಪೋಲಿಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತನಾಡ್ತೇವೆ. ಹೆದ್ದಾರಿಯಲ್ಲಿ ಸಮಸ್ಯೆ ಇರೊದು ಸತ್ಯ. ಆ ಸಮಸ್ಯೆಗಳ ಪ್ರಾಧಿಕಾರಕ್ಕೆ ತಿಳಿಸುತ್ತೇವೆ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಮರಿತಿಬ್ಬೇಗೌಡ, “ಡಿಪಿಆರ್ನಲ್ಲೆ ದೋಷ ಇದೆ. ಆಗಲೇ ಇದನ್ನ ನೋಡಬೇಕಿತ್ತು. ನೋಡಿಲ್ಲ. ಎಷ್ಟು ದಿನದಲ್ಲಿ ಈ ಸಮಸ್ಯೆಗೆ ಪರಿಹಾರ ಒದಗಿಸುತ್ತೀರಾ ತಿಳಿಸಿ. ಕೇಂದ್ರ ಸಚಿವರ ಜೊತೆ ಭೇಟಿ ಮಾಡಿ ಈ ಸಮಸ್ಯೆ ಪರಿಹರಿಸಬೇಕು” ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಸತೀಶ್ ಜಾರಕಿಹೊಳಿ ಉತ್ತರಿಸಿದ್ದು “ಆದಷ್ಟು ಬೇಗ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತನಾಡಿ ಪರಿಹರಿಸುವ ಕೆಲಸ ಮಾಡ್ತೀವಿ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನ ಭೇಟಿ ಮಾಡಿ ತಿಳಿಸಿದ್ದೇವೆ. ಅವರ ಗಮನಕ್ಕೆ ಈ ವಿಚಾರ ಬಂದಿದೆ. ಆದಷ್ಟು ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇವೆ” ಎಂದು ಉತ್ತರಿಸಿದ್ದಾರೆ.