ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಇಂದು ಸಿ.ಟಿ. ರವಿ ಮಾತನಾಡಿದ್ದು ಯುವ ಕಾಂಗ್ರೆಸ್ ಪ್ರತಿಭಟನೆ, ವಿಪಕ್ಷನಾಯಕನ ಆಯ್ಕೆ, ಕೆಂಪಣ್ಣ ಆಯೋಗ ವರದಿ ವಿಚಾರದ ಕುರಿತಾಗಿ ಮಾತನಾಡಿದ್ದಾರೆ.
ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡೋದು ಸರಿಯಾಗಿದೆ: ಸಿ.ಟಿ. ರವಿ!
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, “ಗ್ಯಾರೆಂಟಿ ಕಾರ್ಡ್ಗೆ ಯಾರು ಸಹಿ ಮಾಡಿದ್ದು ಯಾರು? ನರೇಂದ್ರ ಮೋದಿಯೋ ಅಥವಾ ಸಿದ್ದರಾಮಯ್ಯ, ಡಿಕೆಶಿಯೋ?
ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡ್ತಾ ಇರೋದು ಸರಿ ಇದೆ. ಆದ್ರೆ ವಿಳಾಸ ತಪ್ಪಿದೆ. ಹೋಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಮಾಡಲಿ. ಇಲ್ಲ ಯೂತ್ ಕಾಂಗ್ರೆಸ್ಗೆ ರಾಜೀನಾಮೆ ಕೊಡ್ತಿವಿ ಅಂತ ಪಟ್ಟು ಹಿಡಿಯಲಿ. ಅವರು ಅಕ್ಕಿ ಕೊಡಿ ಇಲ್ಲ ರಾಜೀನಾಮೆ ಕೊಡ್ತಿವಿ ಅಂತ ಕೂರಲಿ” ಎಂದಿದ್ದಾರೆ.
ಇನ್ನು ಅವರು ಸದನಕ್ಕೆ ಬಿಜೆಪಿ ಅಡ್ಡಿಪಡಿಸಿಸುತ್ತಿದ್ದೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ್ದು “ಸಿದ್ದರಾಮಯ್ಯನವರೇ ಮೊಂಡಾಟ ಆಡೋದು. ಅವ್ರು ಇವತ್ತು ಮೊಂಡಾಟ ಆಡ್ತಾ ಇಲ್ಲ ಜನತಾ ಪಕ್ಷದಲ್ಲಿ ಇದ್ದಾಗಿನಿಂದಲೂ ಆಡ್ತಾ ಇದ್ದಾರೆ” ಎಂದು ಹೇಳಿದ್ದಾರೆ.
ವಿಪಕ್ಷ ನಾಯಕ ಯಾರಾಗುತ್ತಾರೆ?
ಇದೇ ವೇಳೆಯಲ್ಲಿ ವಿಪಕ್ಷ ನಾಯಕ ಆಯ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, “ನಿನ್ನೆ ನಾನು ರಾಜ್ಯದಲ್ಲಿ ಇರಲಿಲ್ಲ. ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ” ಎಂದಿದ್ದಾರೆ. ಇನ್ನು ಈಶ್ವರಪ್ಪ ,ರಾಜ್ಯಾಧ್ಯಕ್ಷ ಹಿಂದುತ್ವವಾದಿ ಆಗಿರಬೇಕು ಎಂದು ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, “ಈಶ್ವರಪ್ಪ ಅನುಭವಿಗಳು ಹಿರಿಯರು ಪಕ್ಷ ಕಟ್ಟಿದವರು. ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಮುಕ್ತ ಅವಕಾಶ ಇದೆ” ಎಂದಿದ್ದಾರೆ.
ವರದಿ ಕೈಯಲ್ಲಿದ್ದ ಮೇಲೂ ಯಾಕೆ ಸುಮ್ಮನಿದ್ದಾರೆ?
ಬಿಜೆಪಿ ಅವಧಿಯ ಹಗರಣಗಳ ತನಿಖೆಗೆ ಕಾಂಗ್ರೆಸ್ ಮುಂದಾಗಿದ್ದು ಈ ಬಗ್ಗೆ “ಬದಲಾಗಿರುವುದು ಸರ್ಕಾರ, ಅಧಿಕಾರಿಗಳಲ್ಲ ನಾವು ತನಿಖೆಯನ್ನು ಸ್ವಾಗತಿಸುತ್ತೇವೆ. ಆದರ ಜೊತೆಗೆ ಕೆಂಪಣ್ಣ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಇಡಲಿ. ಅದರ ಮೇಲೂ ಎಫ್ಐಆರ್ ಮಾಡಲಿ. ವರದಿ ಕೈ ಸೇರಿದ್ದರು ಯಾಕೆ ಸುಮ್ಮನಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.