ಬೆಂಗಳೂರು: ಸರಳ ಸಜ್ಜನಿಕೆಯ ಡಾ. ರಾಮಲಿಂಗೇಶ್ವರ ಸಿಸಿರಾ 26 ವರ್ಷಗಳಿಂದ ಕನ್ನಡ ನಾಡು-ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿ ಸಂಘಟನೆಯಲ್ಲಿ ನಿರಂತರವಾಗಿ ಸಂಘಟಿಸುವ ಮೂಲಕ ಪರೋಪಕಾರ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ವಿದ್ವಾಂಸ ಡಾ. ಹಂ.ಪ. ನಾಗರಾಜಯ್ಯ ಅಭಿಪ್ರಾಯಪಟ್ಟರು.

ನಗರದ ಶೇಷಾದ್ರಿಪುರ ಕಾಲೇಜಿನ ಸಭಾಂಗಣದಲ್ಲಿ ಡಾ. ಸಿಸಿರಾ ಸ್ನೇಹ ಬಳಗ ಆಯೋಜಿಸಿದ್ದ ಸಿಸಿರಾ ಅವರಿಗೆ 50 ವರ್ಷ ತುಂಬಿದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಬೆಳವಣಿಗೆಯಲ್ಲಿ ಪರಿಚಾರಿಕೆಯ ಕೆಲಸ ಮಾಡುವಾಗ ತನು- ಮನ- ಧನದ ಜತೆಗೆ ತ್ರಿಕರಣ ಶುದ್ಧಿ, ನಿರ್ಮಲ ಮನಸ್ಸಿನಿಂದ ಸಿಸಿರಾ ಸೇವೆ ಮಾಡಿದ್ದಾರೆ. ಆತನನ್ನು ನಾನು 1996 ರಿಂದಲೂ ಬಲ್ಲೆ. ಚಿಕ್ಕ ವಯಸ್ಸಿನಲ್ಲೇ ಮುಂದೆ ದೊಡ್ಡವನಾಗಿ ಕನ್ನಡ ಸೇವಕನಾಗುವ ಭವಿಷ್ಯವನ್ನು ನೋಡಿದ್ದೆನು. ಈಗ 50 ವರ್ಷ ತುಂಬಿದ ಸಂಭ್ರಮವನ್ನು ಸಿಸಿರಾ ಗೆಳೆಯರು ಆಚರಿಸುತ್ತಿರುವುದು ಕನ್ನಡಕ್ಕೆ ನೀಡುವ ಗೌರವವಾಗಿದೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಸಿಸಿರಾ ಅವರು ಕನ್ನಡ ಸಾಹಿತ್ಯ ಸೇವೆಯನ್ನು ತಮ್ಮ ಮೈಮೇಲೆ ಎಳೆದುಕೊಂಡು ಮೈಮನಸ್ಸಿನೊಳಗೆ ತುಂಬಿಕೊಂಡು ನಮ್ಮ ಕಾಲೇಜಿನ ಕನ್ನಡ ಮೇಷ್ಟ್ರಾಗಿ ಕಾಲೇಜಿಗೆ, ಸಮಾಜಕ್ಕೆ ತಮ್ಮದೇ ಆದ ಸೇವೆ ಮಾಡಿದ್ದಾರೆ. ಅವರ ಕನ್ನಡ ಕಾರ್ಯಗಳಿಗೆ ಪೂರಕವಾಗಿ ಉದ್ಯೋಗ ನೀಡಿ, ಆತನ ಬದುಕಿಗೆ ನಮ್ಮ ಶಿಕ್ಷಣ ಸಂಸ್ಥೆ ನೆರವಾಗಿದೆ. ಅವರು ಅದೆಂತಹ ಕಾರ್ಯಗಳಿದ್ದರೂ ಸುಲಭವಾಗಿ ನಿರ್ವಹಿಸುವ ಶಕ್ತಿಯನ್ನು ಹೊಂದಿದವರಾಗಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ ಗಾಯಕರಾದ ಹೊಸಹಳ್ಳಿ ವಾಸುದೇವ್, ಕಂಟನಕುಂಟೆ ಅಶ್ವತ್ಥ್ನಾರಾಯಣ, ಕಿಕ್ಕೇರಿ ಕೃಷ್ಣಮೂರ್ತಿ ಅವರು ಗೀತಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸುಮಂಗಲಿ ಸೇವಾಶ್ರಮದ ಮುಖ್ಯಸ್ಥೆ ಎಸ್.ಜಿ.ಸುಶೀಲಮ್ಮ, ಕಸಾಪದ ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ, ಕೃತಿಯ ಸಂಪಾದಕ ಡಾ. ಆರ್.ವಾದಿರಾಜ್, ಡಾ.ಕೃಷ್ಣ ಹಾನ್ಬಾಳ್, ನಿವೃತ್ತ ತಹಸೀಲಾರ್ ಕೆ.ಎಂ.ರೇವಣ್ಣ, ಕವಯಿತ್ರಿ ಜಯಶ್ರೀ ರಾಜು ಇದ್ದರು.
ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಎಲ್ಲ ಕ್ಷೇತ್ರಗಳ ನೈಜ ಸಾಧಕರನ್ನು ಗುರುತಿಸಿ ಪ್ರಶಸ್ತಿ, ಪುರಸ್ಕಾರ, ಕಾವ್ಯ ಕಥಾ ಕಮ್ಮಟ ಏರ್ಪಡಿಸಿ ಎಲ್ಲರನ್ನೂ ಸಂತೋಷ ಪಡಿಸುವ ಡಾ. ರಾಮಲಿಂಗೇಶ್ವರ ತನ್ನ ಜೀವನದ ಸಾರ್ಥಕತೆಯನ್ನು ಪಡೆದುಕೊಂಡಿರುವುದು ಶ್ಲಾಘನೀಯ.
– ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್, ವಿಶ್ರಾಂತ ಕುಲಪತಿ