ಕಾಸರಗೋಡು/ರಾಂಚಿ: ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಮಾತಿಗೆ ಕೇರಳ ಮೂಲದ 28 ವರ್ಷದ ರಂಜಿತ್ ರಾಮಚಂದ್ರನ್ ಅವರು ತಾಜಾ ಉದಾಹರಣೆಯಾಗಿದ್ದಾರೆ.
ತಮ್ಮ ಬಹುದಿನಗಳ ಕನಸನ್ನು ಇತ್ತೀಚೆಗಷ್ಟೇ ನನಸು ಮಾಡಿಕೊಂಡ ರಂಜಿತ್, ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ. ಸಹನೆಯೊಂದಿಗೆ ಸಾಧಿಸುವ ಹಂಬಲವಿದ್ದರೆ, ಯಶಸ್ಸು ಕಂಡಿತ ಎನ್ನುವುದಕ್ಕೆ ಉದಾಹರಣೆ ಆಗಿರುವ ರಂಜಿತ್ ಅವರ ಯಶೋಗಾಥೆ ಎಲ್ಲರಿಗು ಸ್ಫೂರ್ತಿ ನೀಡುತ್ತದೆ.
ಬಡ ಕುಟುಂಬದಲ್ಲಿ ಹುಟ್ಟಿದ ರಂಜಿತ್ ಅವರ ಮೂಲ ಕೇರಳದ ಕಾಸರಗೋಡು ಜಿಲ್ಲೆ. ಇವರ ತಾಯಿ ನರೇಗಾ ಕೆಲಸವನ್ನು ನಂಬಿದ್ದಾರೆ. ಸಣ್ಣ ಗುಡಿಸಲು, ತೂತು ಬಿದ್ದ ಛಾವಣಿ ಮತ್ತು ಇಕ್ಕಾಟದ ಕೋಣೆಯಲ್ಲೇ ರಂಜಿತ್ ಕುಟುಂಬದ ವಾಸ. ಇವರು ಮನೆಯ ಹಿರಿಯ ಮಗ.
ರಂಜಿತ್ ಅವರು ರಾಜ್ಯದಲ್ಲಿ ಮರಾಠಿ ಮಾತನಾಡುವ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರೆಂದಿಗೂ ತಮ್ಮ ಈ ಸ್ಥಾನಕ್ಕೆ ಬರಲು ಮೀಸಲಾಯಿಯನ್ನು ಬಳಸಿಕೊಳ್ಳಲೇ ಇಲ್ಲ. ತನ್ನ ವಿದ್ಯಾಭ್ಯಾಸದೊಂದಿಗೆ ಮನೆಯವರಿಗೆ ಸಹಾಯ ಮಾಡಲು ನಿರ್ಧರಿಸಿದ ರಂಜಿತ್, ಬಿಎಸ್ಎನ್ಎಲ್ ಟೆಲಿಫೋನ್ ಎಕ್ಸ್ಚೇಂಜ್ ಆಫೀಸ್ನಲ್ಲಿ ರಾತ್ರಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದರು. ಆವಾಗ ತಿಂಗಳಿಗೆ 4000 ಸಾವಿರ ರೂ. ಸಂಬಳ.
ಅಂದಿನಿಂದ ಟೆಲಿಫೋನ್ ಎಕ್ಸ್ಚೇಂಜ್ ಆಫೀಸ್ ರಂಜಿತ್ ಅವರಿಗೆ ತಾತ್ಕಾಲಿಕ ಮನೆಯಾಯಿತು. ಶಾಲೆ ಹಾಗೂ ಕಾಲೇಜಿನಿಂದ ನೇರವಾಗಿ ಇಲ್ಲಿಗೆ ಬರುತ್ತಿದ್ದರು. ಕೇವಲ ಊಟ ಮಾಡಲು ಮಾತ್ರ ಮನೆಗೆ ಹೋಗುತ್ತಿದ್ದರು. ತಮ್ಮ ನಿರಂತರ ಪರಿಶ್ರಮದಿಂದಾಗಿ ಹೈಸ್ಕೂಲ್, ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ರಂಜಿತ್, ಪಿಎಚ್ಡಿ ಮಾಡಲು ಐಐಟಿ ಮದ್ರಾಸ್ಗೆ ತೆರಳಿದರು. ಆದಾಗ್ಯು ದುಡ್ಡಿನ ಸಮಸ್ಯೆ ಅವರಿಗೆ ಕಾಡುತ್ತಲೇ ಇತ್ತು. ಹೀಗಾಗಿ ಐಐಟಿ ತೊರೆಯಲು ಬಯಸಿದರು.
ಆದರೆ, ಐಐಟಿ ಕ್ಯಾಂಪಸ್ನಲ್ಲಿ ನೆಲೆಸಿದ್ದ ಡಾ. ಸುಬಾಶ್ ಸಸಿಧರನ್ ಮತ್ತು ಅವರ ಪತ್ನಿ ವೈದೇಹಿ, ರಂಜಿತ್ ನೆರವಿಗೆ ಧಾವಿಸಿದರು. ನನ್ನ ಮಾರ್ಗದರ್ಶಕರಾದ ಪ್ರೋಫೆಸರ್ ಸುಬಾಶ್ ಅವರು ನನ್ನನ್ನು ಮನವೊಲಿಸಿ ಮತ್ತು ಹುರಿದುಂಬಿಸಿ ಐಐಟಿ ಬಿಡದಂತೆ ತಡೆದರು ಎಂದು ರಂಜಿತ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: ಯುಗಾದಿ ಆಚರಿಸುವ ಖುಷಿಯಲ್ಲಿ ತವರಿಗೆ ಹೊರಟ ಕುಟುಂಬಕ್ಕೆ ಕಾದಿತ್ತು ಭೀಕರ ಸಾವು: ಮಗ ಅನಾಥ!
ಉತ್ತಮ ಮಾರ್ಗದರ್ಶಕರ ಸಹಾಯದಿಂದ ತಮ್ಮ ಕನಸಿನ ಬೆನ್ನತ್ತಿ ಹೊರಟ ರಂಜಿತ್ ಕೊನೆಗೂ 2016ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಪಡೆದರು. ಇದಾದ ಬಳಿಕ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಪಕ ವೃತ್ತಿಗೆ ಸೇರಿಕೊಂಡರು. ಇದರ ಬೆನ್ನಲ್ಲೇ ಇದೀಗ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.
ಪ್ರತಿಷ್ಠಿತ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿರುವುದು ಸಾಧನೆಯೇ ಸರಿ. ಅದರಲ್ಲೂ ರಂಜಿತ್ ಅವರ ಜೀವನ ಪಯಣ ನಿಜಕ್ಕೂ ಮಾದರಿಯಾಗಿದೆ. ಇದೀಗ ತಮ್ಮ ಫೇಸ್ಬುಕ್ನಲ್ಲಿ ತನ್ನ ಮನೆಯ ಚಿತ್ರವನ್ನು ಪೋಸ್ಟ್ ಮಾಡಿ ನಾನು ಇಲ್ಲಿ ಹುಟ್ಟಿ ಇಂದು ಐಐಎಂ ಸಹಾಯಕ ಪ್ರಾಧ್ಯಪಕನಾಗಿದ್ದೇನೆಂದು ಬರೆದುಕೊಂಡಿದ್ದಾರೆ. ರಂಜಿತ್ ಅವರ ಪೋಸ್ಟ್ಗೆ ಮೆಚ್ಚುಗೆಗಳ ಸುರಿಮಳೆಯಾಗುತ್ತಿದೆ. ರಂಜಿತ್ ಅವರ ಪಯಣ ಎಲ್ಲರಿಗೂ ದಾರಿದೀಪವಾಗಲಿ ಎಂದು ಎಲ್ಲರು ಬಯಸಿದ್ದಾರೆ. (ಏಜೆನ್ಸೀಸ್)
ಸುಪ್ರೀಂ ಕೋರ್ಟ್ನಲ್ಲಿ ಕರೊನಾ ಅಲೆ! ನ್ಯಾಯಾಧೀಶರಿಗೆ ವರ್ಕ್ ಫ್ರಂ ಹೋಂ!
ತಟ್ಟೆ- ಲೋಟ ಬಡಿಯುತ್ತ ಬೀದಿಗಿಳಿದ ಮಕ್ಕಳು: ಪಾಲಕರು ಪೊಲೀಸ್ ಠಾಣೆಯಲ್ಲಿ; ಕಂಗೆಟ್ಟ ಮಕ್ಕಳು ರಸ್ತೆಯಲ್ಲಿ!
ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ