ನವದೆಹಲಿ: ಐಪಿಎಲ್ 17ನೇ ಆವೃತ್ತಿಯ ಆರಂಭಿಕ ಹಂತದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತದನಂತರದ ಪಂದ್ಯಗಳಲ್ಲಿ ಸತತ ಆರು ರೋಚಕ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕವಾಗಿ ಐಪಿಎಲ್ 2024ರ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತು. ಇದು ಊಹೆಗೂ ಮೀರಿದ ಗೆಲುವುಗಳಾಗಿದ್ದು, ಆರ್ಸಿಬಿ ಅಭಿಮಾನಿಗಳಲ್ಲಿ ಕಪ್ ಗೆಲ್ಲುವ ಭರವಸೆಯನ್ನು ಮತ್ತಷ್ಟು ಗಟ್ಟಿಯಾಗಿ ನಿಲ್ಲುವಂತೆ ಮಾಡಿತು. ಆದ್ರೆ, ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದ್ದು, ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ಪಡೆ 4 ವಿಕೆಟ್ ಅಂತರದಿಂದ ಗೆದ್ದು ಕ್ವಾಲಿಫೈರ್ 2 ಪಂದ್ಯ ಆಡುವ ಅರ್ಹತೆ ಪಡೆಯಿತು.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರಿಂದ ಮೊಮ್ಮಗ ಪ್ರಜ್ವಲ್ಗೊಂದು ಪತ್ರ!
ಇನ್ನು ಆರ್ಸಿಬಿ ತಂಡ ಸೋಲುತ್ತಿದ್ದಂತೆ ಮತ್ತದೇ ವಿರೋಧಿ ತತ್ವ, ಟೀಕಾ ಪ್ರಹಾರಗಳು ಭುಗಿಲೆದ್ದಿವೆ. ಬೆಂಗಳೂರು ಪಡೆಗೆ ಗೆಲುವು ನಿಶ್ಚಯವಲ್ಲ, ಕಪ್ ಗೆಲ್ಲುವ ಸಾಮರ್ಥ್ಯವಿಲ್ಲ. ಟ್ರೋಫಿ ಪಡೆಯುವ ಅರ್ಹತೆ ಇವರಿಗಿಲ್ಲ ಎಂಬ ವ್ಯಾಪಕ ಟೀಕೆ, ಟಿಪ್ಪಣಿಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಿ ಹೋಗಿವೆ. ತಮ್ಮ ತಂಡದ ವಿರುದ್ಧ ಭಾರೀ ವಾಗ್ದಾಳಿ ನಡೆಸುತ್ತಿರುವವರ ಮಧ್ಯೆ ಅಭಿಮಾನಿಗಳ ಬೆಂಬಲದ ಮಾತುಗಳು ಮಾತ್ರ ತಂಡಕ್ಕೆ ಹೆಚ್ಚಿನ ಭರವಸೆ ಮತ್ತು ಮುಂದಿನ ಸೀಸನ್ನಲ್ಲಿ ಪುಟಿದೇಳುವ ಮನಸ್ಥಿತಿಯನ್ನು ನೀಡುವಂತಿದೆ.
ಆರ್ಸಿಬಿ ಸೋಲನ್ನು ಕೇಕೆ ಹಾಕಿಕೊಂಡು ಮಾತನಾಡುತ್ತಿರುವವರ ನಡುವೆ ಇದೀಗ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಆದ ಕೆವಿನ್ ಪೀಟರ್ಸನ್ ನೀಡಿದ ಬೇಡದ ಸಲಹೆಯೊಂದು ಮಾತ್ರ ಆರ್ಸಿಬಿ ಅಭಿಮಾನಿಗಳ ತಾಳ್ಮೆಯನ್ನು ಪರೀಕ್ಷಿಸಿದೆ ಹಾಗೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. “ಈ ಸೀಸನ್ನಲ್ಲಿ ಅತ್ಯಧಿಕ ರನ್ ಗಳಿಸಿರುವ ವಿರಾಟ್ ಕೊಹ್ಲಿ ನಿಜಕ್ಕೂ ಒಬ್ಬ ಅತ್ಯುತ್ತಮ ಆಟಗಾರ. ಆದ್ರೆ, ಒಂದು ಬಾರಿಯೂ ಟ್ರೋಫಿ ಗೆಲ್ಲದ ಆರ್ಸಿಬಿ ತಂಡದಲ್ಲಿರುವುದು ವ್ಯರ್ಥ ಅನ್ನೋದು ನನ್ನ ಅಭಿಪ್ರಾಯ” ಎಂದಿದ್ದಾರೆ.
ಇದನ್ನೂ ಓದಿ: ಗಂಗೊಳ್ಳಿಯಲ್ಲಿ ನಿರಂತರ ವಿದ್ಯುತ್ ಕಡಿತ, ಮೆಸ್ಕಾಂ ವಿರುದ್ಧ ಗ್ರಾಹಕರ ಆಕ್ರೋಶ, ದುರಸ್ತಿಗೆ ಕ್ರಮಕೈಗೊಳ್ಳದ ಗುತ್ತಿಗೆದಾರರು
“ಡೇವಿಡ್ ಬೆಕ್ಹ್ಯಾಮ್, ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯಂತಹ ಫುಟ್ಬಾಲ್ ದಿಗ್ಗಜರೇ ತಮ್ಮ ನೆಚ್ಚಿನ ಕ್ಲಬ್ಗಳನ್ನು ತೊರೆದು ಬೇರೆಡೆ ಯಶಸ್ಸನ್ನು ಸಾಧಿಸಲು ಮುಂದಾಗಿದ್ದಾರೆ. ಈಗ ಇದೇ ರೀತಿ ವಿರಾಟ್ ಕೊಹ್ಲಿ ಆರ್ಸಿಬಿ ತೊರೆಯುವ ಸಮಯ. ವಿರಾಟ್ ದೀರ್ಘ ಮತ್ತು ಕಠಿಣವಾಗಿ ಯೋಚಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರುವುದು ಉತ್ತಮ” ಎಂದು ಹೇಳಿದರು.
“ವಿರಾಟ್ ಅವರ ಮನೆ ದೆಹಲ್ಲಿಯಲ್ಲಿರುವುದು ನನಗೆ ಗೊತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಸೇರುವುದರಿಂದ ಅವರಿಗೆ ತಮ್ಮ ಕುಟುಂಬದೊಂದಿಗೆ ಹಚ್ಚು ಸಮಯ ಕಳೆಯಲು ಸುಲಭವಾಗುತ್ತದೆ. ಕೊಹ್ಲಿ ಮೂಲತಃ ದೆಹಲಿಯವರು. ಹಾಗಿದ್ದ ಮೇಲೆ ಅವರು ಏಕೆ ಬೆಂಗಳೂರಿಗೆ ಹೋಗಿ ಆಡಬೇಕು? ತಂಡ ತೊರೆದು, ಬೇರೆಡೆ ಸಾಧಿಸುವುದು ಒಳಿತು” ಎಂದು ಹೇಳಿದ್ದಾರೆ. ಸದ್ಯ ಕೆವಿನ್ ಹೇಳಿಕೆಗೆ ಕೆರಳಿರುವ ಆರ್ಸಿಬಿ ಅಭಿಮಾನಿಗಳು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಮುಂದಿನ ವರ್ಷ ಈ 4 ಸ್ಟಾರ್ ಆಟಗಾರರನ್ನು ಕೈಬಿಡಲಿದೆ ಆರ್ಸಿಬಿ ಫ್ರಾಂಚೈಸಿ! ಫ್ಯಾನ್ಸ್ ಕಂಗಾಲು
ಇವರಿಬ್ಬರಿಲ್ಲ ಅಂದ್ರೆ IPLಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು