ಮುಂಬೈ: ಕಾರ್ತಿಕ್ ಆರ್ಯನ್ ಇತ್ತೀಚೆಗೆ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಇತ್ತೀಚೆಗೆ, ಎರಡು ಚಿತ್ರಗಳಿಂದ ಅವರು ಕಾರಣಾಂತರಗಳಿಂದ ಹೊರಬಿದ್ದಿದ್ದರು. ಈಗ ಅವರು ಇನ್ನೊಂದು ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ.
ಇದನ್ನೂ ಓದಿ: 10 ವರ್ಷಗಳ ನಂತರ ಪ್ರಿಯದರ್ಶನ್ ನಿರ್ದೇಶನದಲ್ಲಿ ಅಕ್ಷಯ್ ಹೊಸ ಚಿತ್ರ …
ಎರಡು ಚಿತ್ರಗಳನ್ನು ಬ್ಯಾಕ್ ಟು ಬ್ಯಾಕ್ ಕಳೆದುಕೊಂಡ ಕಾರ್ತಿಕ್, ಆ ನಂತರ ‘ಸತ್ಯನಾರಾಯಣ್ ಕೀ ಕಥಾ’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು ನೆನಪಿರಬಹುದು. ಸಾಜಿದ್ ನಡಿಯಾಡ್ವಾಲ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಮೀರ್ ವಿದ್ವಂಸ್ ನಿರ್ದೇಶಿಸುತ್ತಿದ್ದಾರೆ. ಈಗ ಈ ಚಿತ್ರವು ವಿವಾದಕ್ಕೆ ಸಿಲುಕಿದೆ.
ಸತ್ಯನಾರಾಯಣ ಎನ್ನುವುದು ವಿಷ್ಣುವಿನ ಇನ್ನೊಂದು ರೂಪದ ಹೆಸರು. ‘ಸತ್ಯನಾರಾಯಣ್ ಕೀ ಕಥಾ’ ಎಂಬ ಹೆಸರನ್ನು ಇಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಕೆಲವು ಸಂಘಟನೆಗಳು ಆರೋಪ ಮಾಡಿದ ಹಿನ್ನೆಲೆಯಲ್ಲಿ, ಇದೀಗ ಚಿತ್ರದ ಹೆಸರನ್ನು ಬದಲಾಯಿಸಲು ಚಿತ್ರತಂಡ ಮುಂದಾಗಿದೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಿರ್ದೇಶಕ ಸಮೀರ್ ವಿದ್ವಂಸ್, ‘ನಾವು ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ಚಿತ್ರಕಥೆ ಮಾಡುವ ಪ್ರಕ್ರಿಯೆಯಲ್ಲಿ ಈ ಹೆಸರು ಚಿತ್ರಕ್ಕೆ ಸೂಕ್ತವಾಗಿರುತ್ತದೆ ಎಂದನಿಸಿ, ಚಿತ್ರಕ್ಕೆ ‘ಸತ್ಯನಾರಾಯಣ್ ಕೀ ಕಥಾ’ ಎಂಬ ಹೆಸರನ್ನು ಇಡಲಾಯಿತು. ಈ ಕುರಿತು ಆಕ್ಷೇಪ ಎದುರಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಹೆಸರನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಸಿ’ ಗ್ರೇಡ್ ಚಿತ್ರಗಳ ವಿಮರ್ಶೆ ಮಾಡುವುದಿಲ್ಲವಂತೆ ಕೆಆರ್ಕೆ …
ಹಾಗಾದರೆ, ‘ಸತ್ಯನಾರಾಯಣ್ ಕೀ ಕಥಾ’ ಎಂಬ ಹೆಸರಿನ ಬದಲಿಗೆ, ಇನ್ಯಾವ ಹೆಸರಿಡಲಾಗುತ್ತದೆ ಎಂಬ ಪ್ರಶ್ನೆ ಸಹಜವೇ. ಸದ್ಯಕ್ಕೆ ಚಿತ್ರತಂಡ ಯಾವುದೇ ಹೆಸರಿಡದೆ, ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಚಿತ್ರದ ಹೊಸ ಹೆಸರು ಏನಿರಬಹುದು ಎಂಬ ಚಿತ್ರತಂಡ ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.