ಮುಂಬೈ: ಬಾಲಿವುಡ್ನ ಯಾವುದೇ ಸಿನಿಮಾ ಬಿಡುಗಡೆಯಾಗಲಿ, ಸ್ವಯಂಘೋಷಿತ ಜಗತ್ತಿನ ನಂಬರ್ ಒನ್ ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ಆ ಚಿತ್ರವನ್ನು ವಿಮರ್ಶೆ ಮಾಡುತ್ತಾರೆ. ಚಿತ್ರದ ಬಗ್ಗೆ ಹಿಗ್ಗಾಮುಗ್ಗಾ ಬಯ್ಯುತ್ತಾರೆ. ಎರಡು ತಿಂಗಳ ಹಿಂದೆ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ‘ರಾಧೇ’ ಚಿತ್ರವನ್ನು ಬೈದು, ಕೊನೆಗೆ ಅವರ ಮೇಲೆ ಸಲ್ಮಾನ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಮಿಡಿದ ಕಾವ್ಯಾ ಮನ; ನಟಿಯಿಂದ ಕೂದಲು ದಾನ..
ಈಗ್ಯಾಕೆ ಈ ವಿಷಯವೆಂದರೆ, ‘ರಾಧೇ’ ನಂತರ ಬಾಲಿವುಡ್ನಲ್ಲಿ ಇನ್ನೂ ಎರಡು ಚಿತ್ರಗಳು ಓಟಿಟಿ ಮೂಲಕ ಬಿಡುಗಡೆಯಾಗಿವೆ. ಒಂದು ವಿದ್ಯಾ ಬಾಲನ್ ಅಭಿನಯದ ‘ಶೇರ್ನಿ’. ಇನ್ನೊಂದು ತಾಪ್ಸಿ ಪನ್ನು ಅಭಿನಯದ ‘ಹಸೀನ್ ದಿಲ್ರುಬಾ’. ಈ ಎರಡೂ ಚಿತ್ರಗಳನ್ನು ಕೆಆರ್ಕೆ ವಿಮರ್ಶೆ ಮಾಡಿಲ್ಲ. ಸಲ್ಮಾನ್ ಖಾನ್ ಹಾಕಿದ ಕೇಸಿನಿಂದ ಹೆದರಿ ಅವರು ಇಂಥದ್ದೊಂದು ನಿರ್ಧಾರ ಮಾಡಿದರಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಆದರೆ, ಆ ಎರಡೂ ಚಿತ್ರಗಳನ್ನು ವಿಮರ್ಶೆ ಮಾಡದಿರುವುದಕ್ಕೆ ಕೆಆರ್ಕೆಗೆ ತಮ್ಮದೇ ಕಾರಣಗಳಿವೆಯಂತೆ. ಆ ಕಾರಣಗಳನ್ನು ಅವರೇ ಹೇಳಿಕೊಂಡಿದ್ದಾರೆ.
‘ಶೇರ್ನಿ’ ವಿಮರ್ಶೆ ಮಾಡದಿರುವ ಬಗ್ಗೆ ಮಾತನಾಡಿರುವ ಅವರು, ‘ಬಹಳಷ್ಟು ಜನ ಆ ಚಿತ್ರವನ್ನು ಯಾಕೆ ವಿಮರ್ಶೆ ಮಾಡಿಲ್ಲ ಅಂತ ಕೇಳುತ್ತಿದ್ದಾರೆ. ನಾನು ಸಣ್ಣ ಚಿತ್ರಗಳನ್ನು ನೋಡುವುದಿಲ್ಲ ಮತ್ತು ಮಾತನಾಡುವುದೂ ಇಲ್ಲ. ಏಕೆಂದರೆ, ನಾನು ಜಗತ್ತಿನ ನಂಬರ್ ಒನ್ ವಿಮರ್ಶಕ. ನನ್ನದೇ ಆದ ಒಂದು ಬ್ರಾಂಡ್ ಇದೆ. ಹೀಗಿರುವಾಗ ಸಣ್ಣಪುಟ್ಟ ಚಿತ್ರಗಳಿಗೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಅದೇ ರೀತಿ ‘ಹಸೀನ್ ದಿಲ್ರುಬಾ’ ಕುರಿತು ಮಾತನಾಡಿರುವ ಅವರು, ‘ಮೊದಲಿಗೆ ನನಗೆ ಆ ಸಿನಿಮಾ ಎಲ್ಲಿ ಮತ್ತು ಯಾವಾಗ ಬಿಡುಗಡೆಯಾಯಿತು ಎಂಬ ವಿಷಯವೇ ಗೊತ್ತಿಲ್ಲ. ಎರಡನೆಯದಾಗಿ, ನಾನು ಸಿ ಗ್ರೇಡ್ ನಟ-ನಟಿಯರ ಸಿ ಗ್ರೇಡ್ ಸಿನಿಮಾಗಳನ್ನು ನೋಡುವುದಿಲ್ಲ. ಏಕೆಂದರೆ, ನಾನು ಜಗತ್ತಿನ ನಂಬರ್ ಒನ್ ವಿಮರ್ಶಕ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟ ಕೋಮಲ್ಗೆ ‘2020’ ಉರುಳು!
ಕೆಆರ್ಕೆ ಅವರ ಈ ಮಾತುಗಳು ಹಲವರನ್ನು ಕೆರಳಿಸಿದೆ. ಜಗತ್ತಿನಲ್ಲಿ ಯಾವುದು ದೊಡ್ಡ ಅಥವಾ ಸಣ್ಣ ಚಿತ್ರಗಳು ಅಂತ ಇರುವುದಿಲ್ಲ. ಒಬ್ಬ ವಿಮರ್ಶಕನ ಕೆಲಸ ಎಲ್ಲ ಚಿತ್ರಗಳನ್ನೂ ವಿಮರ್ಶೆ ಮಾಡುವುದು. ಹಾಗಾಗಿ, ನೀವು ವಿಮರ್ಶಕರೇ ಆಗಿದ್ದರೆ, ಈ ರೀತಿ ದೊಡ್ಡದು ಅಥವಾ ಚಿಕ್ಕದು ಎನ್ನುವುದನ್ನು ಬಿಟ್ಟು, ಎಲ್ಲ ಸಿನಿಮಾಗಳನ್ನು ನೋಡಿ ವಿಮರ್ಶೆ ಮಾಡಿ ಎಂದು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.