ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಬುಧವಾರ(ಮೇ 10) ನಡೆಯುವ ಮತದಾನದ ಮೇಲೆ ಚಂಡಮಾರುತ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.
ವಿಶೇಷವಾಗಿ ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಇದರ ಪ್ರಭಾವ ತುಸು ಹೆಚ್ಚು ಇರಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಂಗಳವಾರ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ತಮಿಳುನಾಡಿನ ಕರಾವಳಿ ಸಮೀಪದ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಮಾರುತಗಳಿವೆ. ಮೇ 9ರಂದು ಇದು ತೀವ್ರಗೊಂಡು ಚಂಡಮಾರುತವಾಗಿ ಪರಿವರ್ತನೆಯಾಗಲಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ-2023: ಮೆಟ್ರೋ ಸೇವೆ ಮಧ್ಯರಾತ್ರಿವರೆಗೂ ವಿಸ್ತರಣೆ
ಗಂಟೆಗೆ 60 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಮೇ 11ರವರೆಗೆ ಬಂಗಾಳಕೊಲ್ಲಿಯ ಉತ್ತರ-ವಾಯುವ್ಯ ದಿಕ್ಕಿನತ್ತ ಮಾರುತಗಳು ಚಲಿಸಲಿವೆ. ನಂತರ ಬಾಂಗ್ಲಾದೇಶ – ಮ್ಯಾನ್ಮಾರ್ ಕರಾವಳಿ ಕಡೆಯತ್ತ ಹಾದು ಹೋಗಲಿವೆ. ಇದರ ಪರಿಣಾಮ ಕರ್ನಾಟಕ, ಕೇರಳ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಮಾಹೆ, ಕಾರೈಕಲ್ ಹಾಗೂ ಪುದುಚೇರಿಯಲ್ಲಿ ಮೇ 9ರಿಂದ ಮೇ 13ರವರೆಗೆ ಭಾರಿ ಮಳೆ ಸುರಿಯಲಿದೆ.ಪ್ರತಿ ಗಂಟೆಗೆ 60 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ಗಾಳಿ ವೇಗ 50-60 ಕಿ.ಮೀ.ನಿಂದ 70 ಕಿ.ಮೀ.ಗೆ ಕ್ರಮೇಣ ಹೆಚ್ಚಾಗಲಿದೆ. ಇದರಿಂದ ಎತ್ತರದ ಅಲೆಗಳು ಏಳಲಿವೆ.
ಇದನ್ನೂ ಓದಿ: ಬಿಜೆಪಿ ಪರ ಲಿಂಗಾಯತ ಮುಖಂಡರಿಂದ ಮತಯಾಚನೆ; ಡಾ. ವಿಜಯ ಸಂಕೇಶ್ವರ, ಪ್ರಲ್ಹಾದ ಜೋಶಿ ಭಾಗಿ
5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಚಂಡಮಾರುತ ಪರಿಣಾಮ ಮುಂದಿನ 5 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಚಾಮರಾಜನಗರ,ಚಿಕ್ಕಮಗಳೂರು, ಕೊಡಗು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಮೇ 9ರಂದು ಭಾರಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಕೋಲಾರ, ವಿಜಯಪುರ ಹಾಗೂ ಬೆಳಗಾವಿ ಸೇರಿ ರಾಜ್ಯ ವಿವಿಧ ಭಾಗಗಳಲ್ಲಿ ಭರ್ಜರಿ ವರ್ಷಧಾರೆಯಾಗಿದೆ.