ಚೆನ್ನೈ: ಮಕ್ಕಳ್ ನಿಧಿ ಮಯ್ಯಮ್ ಎಂಬ ಪಕ್ಷವನ್ನು ಸ್ಥಾಪಿಸಿ, ಇತ್ತೀಚೆಗಷ್ಟೇ ತಮಿಳು ನಾಡು ಅಸೆಂಬ್ಲಿ ಚುನಾವಣೆಗಳನ್ನು ಸ್ಪರ್ಧಿಸಿದ್ದ ಹಿರಿಯ ನಟ-ನಿರ್ದೇಶಕ ಕಮಲ್ ಹಾಸನ್ ತಾವು ಕೊನೆಯುಸಿರು ಇರುವವರೆಗೂ ರಾಜಕೀಯ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಅಮೃತಮತಿ’ಗೆ ಚಿತ್ರಕ್ಕೆ ಮತ್ತೆರೆಡು ಪ್ರಶಸ್ತಿಗಳು
ಮೂರು ವರ್ಷಗಳ ಮುನ್ನ ರಾಜಕೀಯ ಪಕ್ಷ ಸ್ಥಾಪಿಸಿದ್ದ ಕಮಲ್ ಹಾಸನ್, ಅದರ ಮೂಲಕ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಈ ಬಾರಿಯ ಚುನಾವಣೆಗಳಲ್ಲೂ ಅವರು ಸ್ಪರ್ಧಿಸಿದ್ದರು. ಅವರೂ ಸೇರಿದಂತೆ, ಅವರ ಪಕ್ಷದ ಎಲ್ಲರೂ ಸೋತು ಹೋಗಿದ್ದರು. ಚುನಾವಣೆಗಳಲ್ಲಿ ಪಕ್ಷ ಹೀನಾಯ ಸೋಲು ಕಾಣುತ್ತಿದ್ದಂತೆಯೇ, ಹಲವು ಮುಖಂಡರು ಪಕ್ಷವನ್ನು ಬಿಟ್ಟು ಹೋಗಿದ್ದರು. ಅಷ್ಟೇ ಅಲ್ಲ, ಕಮಲ್ ಹಾಸನ್ ಹೆಚ್ಚು ದಿನಗಳ ಕಾಲ ರಾಜಕೀಯದಲ್ಲಿ ಇರುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಅವರು ಪಕ್ಷವನ್ನು ವಿಸರ್ಜಿಸಿ, ಚಿತ್ರರಂಗಕ್ಕೆ ವಾಪಸ್ಸು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಕಮಲ್ ಹಾಸನ್, ‘ನಾನು ಚುನಾವಣೆಗಳಲ್ಲಿ ಸೋತಿರಬಹುದು. ಆದರೆ, ಅದು ದೊಡ್ಡ ಹಿನ್ನಡೆಯೇನಲ್ಲ. ನಾನು ರಾಜಕೀಯದಲ್ಲೇ ಮುಂದುವರೆಯುತ್ತೇನೆ ಮತ್ತು ಯಾವ ಕಾರಣಕ್ಕೂ ಪಕ್ಷವನ್ನು ವಿಸರ್ಜಿಸುವುದಿಲ್ಲ. ಪಕ್ಷವನ್ನು ಬಿಟ್ಟು ಹೋದವರು ನನ್ನಿಂದ ಬಿಟ್ಟು ಹೋಗಲಿಲ್ಲ. ಅವರು ಬಹಳಷ್ಟು ನಿರೀಕ್ಷಿಸಿ ಬಂದಿದ್ದರು. ಅವರಿಗೆ ನನ್ನ ಸ್ಟೈಲ್ ಇಷ್ಟವಾಗಲಿಲ್ಲ. ಬಿಟ್ಟು ಹೋದ ಕೆಲವರು ವಾಪಸ್ಸು ಬರಬಹುದು. ಆದರೆ, ಯಾವುದೇ ಕಾರಣಕ್ಕೂ ಅವರನ್ನು ಸೇರಿಸಿಕೊಳ್ಳುವುದಿಲ್ಲ’ ಎಂದು ಕಮಲ್ ಹೇಳಿದ್ದಾರೆ.
ಇದನ್ನೂ ಓದಿ: ಇಂದು ಅನುಪಮ್ ಖೇರ್ ಪಾಲಿಗೆ ವಿಶೇಷ ದಿನ … ಯಾಕೆ?
ಕೊನೆಯುಸಿರು ಇರುವವರೆಗೂ ರಾಜಕೀಯ ಬಿಡುವುದಿಲ್ಲ ಎಂದಿರುವ ಕಮಲ್, ಮುಂದಿನ ದಿನಗಳಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸಿ, ಮತ್ತೊಮ್ಮೆ ಜನರ ಎದುರು ಬರುವುದಾಗಿ ಹೇಳಿದ್ದಾರೆ.