ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ಬೈಕ್ನಿಂದ ಟೂಲ್ಕಿಟ್ ಬ್ಯಾಗ್ ಸಹಿತ ಐಫೋನ್ ಮೊಬೈಲ್ ಕದ್ದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಉತ್ತರ ಕರ್ನಾಟಕದ ಬಾದಾಮಿ ನಿವಾಸಿ ಬಸವರಾಜು (38) ಎಂದು ಗುರುತಿಸಲಾಗಿದೆ.
ಉಡುಪಿಯ ಪ್ರಶಾಂತ್ ಪೂಜಾರಿ ಕಳೆದ ಶುಕ್ರವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಂದವರು ಬೈಕ್ನ್ನು ದೇವಳದ ಉತ್ತರ ಭಾಗದ ದ್ವಾರದ ಬಳಿ ನಿಲ್ಲಿಸಿದ್ದರು. ಅದರಲ್ಲಿ ಐಫೋನ್ ಮೊಬೈಲ್ ಸಹಿತ ತಮ್ಮ ಟೂಲ್ಕಿಟ್ ಬ್ಯಾಗ್ ಇದ್ದು ದೇವರ ದರ್ಶನ ಮಾಡಿ ವಾಪಸ್ ಬಂದಾಗ ಬ್ಯಾಗ್ ನಾಪತ್ತೆಯಾಗಿತ್ತು. ಬೈಕಿನಿಂದ ಅಪರಿಚಿತನೋರ್ವ ಬ್ಯಾಗ್ ತೆಗೆದು ಹೋಗುತ್ತಿರುವುದು ದೇವಳದ ಸಿಸಿಟಿವಿ ಫೂಟೇಜ್ನಲ್ಲಿ ದಾಖಲಾಗಿತ್ತು.
ಪೊಲೀಸರು ದೇವಸ್ಥಾನದ ಸಿಸಿ ಕ್ಯಾಮರಾ ಸಹಿತ ನಗರದ ವಿವಿಧ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.
ಆರೋಪಿ ಮಂಗಳೂರು ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಒಪ್ಪಿಕೊಂಡಿದ್ದು, ಕಳವು ಮಾಡಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.