ಮುಂಬೈ: ಮುಂಬೈಗೆ ಬರಬೇಡ..ಎಂದು ಹಲವರು ನನ್ನನ್ನು ಹೆದರಿಸುತ್ತಿದ್ದಾರೆ. ಆದರೆ ನಾನು ಸೆಪ್ಟೆಂಬ್ 9ರಂದು ಮನಾಲಿಯಿಂದ ಮುಂಬೈಗೆ ಬಂದೇ ಬರುತ್ತೇನೆ..ಅದ್ಯಾರಿಗೆ ನನ್ನನ್ನು ತಡೆಯಲು ತಾಕತ್ತಿದೆಯೋ ಅವರು ತಡೆಯಲಿ ಎಂದು ನಟಿ ಕಂಗನಾ ರಣಾವತ್ ಸವಾಲು ಹಾಕಿದ್ದಾರೆ.
ಅಂಥ ಸವಾಲು ಹಾಕಿದ ನಟಿಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಬೆಂಬಲ ನೀಡಿದ್ದು, ಕಂಗನಾ ರಣಾವತ್ ಅವರು ಸೆಪ್ಟೆಂಬರ್ 9ರಂದು ಮುಂಬೈಗೆ ಭೇಟಿ ನೀಡಲು, ನಮ್ಮ ರಾಜ್ಯ ಸರ್ಕಾರ ಅವರಿಗೆ ಭದ್ರತೆ ಒದಗಿಸಲಿದೆ ಎಂದು ಹೇಳಿದ್ದಾರೆ.
ಕಂಗನಾ ಅವರು ಹಿಮಾಚಲ ಪ್ರದೇಶದ ಮಗಳು. ಹಾಗೇ ಓರ್ವ ಸೆಲೆಬ್ರಿಟಿ ಕೂಡ ಹೌದು. ಅವರಿಗೆ ರಕ್ಷಣೆ ಒದಗಿಸುವುದು ನಮ್ಮ ಕರ್ತವ್ಯ. ನಾನು ಡಿಜಿಪಿ ಸಂಜಯ್ ಕುಂದು ಅವರೊಂದಿಗೆ ಮಾತನಾಡಿದ್ದೇನೆ. ಕಂಗನಾ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ಮೃತಪಟ್ಟ ಬಳಿಕ ಕಂಗನಾ ರಣಾವತ್ ಹಲವರ ಕಣ್ಣಲ್ಲಿ ವಿಲನ್ ಆಗಿದ್ದಾರೆ. ಆದರೆ ಅವರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬೋಲ್ಡ್ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಈ ಮಧ್ಯೆ ಕಂಗಾನ ಸಹೋದರಿ ರಂಗೋಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿ ಸಹೋದರಿಗೆ ಭದ್ರತೆ ನೀಡಲು ಮನವಿ ಮಾಡಿದ್ದಾರೆ. ಹಾಗೇ, ಕಂಗನಾ ತಂದೆಯೂ ಕೂಡ ಸಿಎಂಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)