ನವದೆಹಲಿ: “ಸರ್ಕಾರಕ್ಕಿಂತ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿರುವುದು ದೇಶದ್ರೋಹವಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹದ ಆರೋಪ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸುತ್ತಾ, ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರಾದ ರಜತ್ ಶರ್ಮ ಮತ್ತು ಡಾ. ನೇಹ್ ಶ್ರೀವಾಸ್ತವ ಅವರು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಅವರು ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದುಮಾಡಿದ ಭಾರತ ಸರ್ಕಾರದ ಆದೇಶವನ್ನು ವಿರೋಧಿಸುತ್ತಾ, ಕಾಶ್ಮೀರದ ಮುಗ್ಧ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಆದ್ದರಿಂದ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಿ ಅವರ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ತುರ್ತಪರಿಸ್ಥಿತಿ ಹೇರಿದ್ದು, ಆ ಸಂದರ್ಭದಲ್ಲಿ ನಡೆದಿದ್ದೆಲ್ಲ ತಪ್ಪೆಂದ ರಾಹುಲ್ ಗಾಂಧಿ
2019 ರ ಆಗಸ್ಟ್ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ್ದ ಅಬ್ದುಲ್ಲಾ, “ಆರ್ಟಿಕಲ್ 370 ರ ಪುನರ್ಸ್ಥಾಪನೆಗಾಗಿ ಚೀನಾದ ಸಹಾಯ ಕೋರುತ್ತೇನೆ” ಎಂದು ಲೈವ್ ಆಗಿ ಹೇಳಿಕೆ ನೀಡಿದ್ದರು. ಈ ಮೂಲಕ ಕಾಶ್ಮೀರದ ಜನರಲ್ಲಿ ದೇಶವಿರೋಧಿ ಭಾವನೆ ಮೂಡಿಸಿದ್ದಲ್ಲದೆ, ಕಾಶ್ಮೀರವನ್ನು ಚೀನಾ ಮತ್ತು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತ ಅವರ ವಿಭಾಗೀಯ ಪೀಠವು, ಅರ್ಜಿದಾರರು ತಮ್ಮ ಆರೋಪಗಳನ್ನು ದೃಢೀಕರಿಸಲು ವಿಫಲರಾದ ಕಾರಣಕ್ಕೆ ಪ್ರಕರಣವನ್ನು ವಜಾಗೊಳಿಸಿದೆ. ಈ ಬಗ್ಗೆ ಮಂಗಳವಾರ (ಮಾರ್ಚ್ 2) ಆದೇಶ ಹೊರಡಿಸಿರುವ ನ್ಯಾಯಪೀಠ ಈ ರೀತಿಯ ಗಂಭೀರ ಆರೋಪಗಳನ್ನು ಮಾಡಿದ್ದಕ್ಕಾಗಿ ಅರ್ಜಿದಾರರ ಮೇಲೆ 50 ಸಾವಿರ ರೂ.ಗಳ ದಂಡವನ್ನೂ ವಿಧಿಸಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಕೋ-ವಿನ್ ಸರ್ಟಿಫಿಕೇಟ್ : ಟಿಎಂಸಿ ಕಣ್ಣು ಕುಕ್ಕಿದ ಪ್ರಧಾನಿ ಮೋದಿ ಫೋಟೋ !
ಅಧಿಕಾರದ ಬೆನ್ನುಹತ್ತಿ…? ಓಡಿಕೊಂಡು ಪ್ರಚಾರ ಸಭೆಗೆ ಹೋದ ಪ್ರಿಯಾಂಕ!
ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್ವೇ ಪ್ರೀತಿಯ ಪ್ರಸಂಗ