ಕೊಲ್ಕತಾ: ಕರೊನಾ ಲಸಿಕೆ ತೆಗೆದುಕೊಂಡ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಸರ್ಟಿಫಿಕೇಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಿರುವ ಬಗ್ಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಆಕ್ಷೇಪ ವ್ಯಕ್ತಪಡಿಸಿದೆ. ಈ ತಿಂಗಳ ಕೊನೆಯಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಯ ನಾಯಕರಾಗಿರುವ ಮೋದಿ ಅವರ ಫೋಟೋ ಇರುವ ಸರ್ಟಿಫಿಕೇಟ್ಗಳನ್ನು ವಿತರಿಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದಿದೆ.
ಕರೊನಾ ಲಸಿಕೆ ತೆಗೆದುಕೊಂಡಿರುವುದನ್ನು ಪ್ರಮಾಣೀಕರಿಸಲು ಮೊದಲ ಡೋಸ್ ಪಡೆಯುತ್ತಿದ್ದಂತೆ ಪ್ರಾವಿಷನಲ್ ಸರ್ಟಿಫಿಕೇಟ್ಅನ್ನು, ಎರಡನೇ ಡೋಸ್ ಪಡೆಯುತ್ತಿದ್ದಂತೆ ಫೈನಲ್ ಸರ್ಟಿಫಿಕೇಟ್ಅನ್ನು ಕೋ-ವಿನ್ ಮೂಲಕ ನೀಡಲಾಗುತ್ತದೆ. ಈ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿ ಮೋದಿ ಅವರ ಫೋಟೋ ಜೊತೆಗೆ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಕರೊನಾ ವಿರುದ್ಧ ಹೋರಾಡುವ ಬಗ್ಗೆ ನೀಡಿರುವ ಸಂದೇಶ ಇರುತ್ತದೆ.
ಈಗ ಬಂಗಾಳದಲ್ಲಿ ಆಡಳಿತದಲ್ಲಿರುವ ಟಿಎಂಸಿ, ಸರ್ಕಾರಿ ಸರ್ಟಿಫಿಕೇಟ್ನಲ್ಲಿ ತಮ್ಮ ಫೋಟೋ ಹಾಕುವ ಮೂಲಕ ಪ್ರಧಾನಿ ಅನಗತ್ಯ ಲಾಭ ಪಡೆದುಕೊಳ್ಳುತ್ತಿದ್ದಾರೆ, ಸರ್ಕಾರಿ ವ್ಯವಸ್ಥೆಯನ್ನು ಅತಿಶಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಟಿಎಂಸಿ ಸಂಸದ ಡೆರೆಕ್ ಓಬ್ರೇನ್ ದೂರು ನೀಡಿದ್ದಾರೆ.
ಇದನ್ನೂ ಓದಿ: “ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”
“ತಮ್ಮ ಫೋಟೋ, ಹೆಸರು ಮತ್ತು ಸಂದೇಶವನ್ನು ಆರೋಗ್ಯ ಸಚಿವಾಲಯ ನೀಡುತ್ತಿರುವ ಪ್ರಾವಿಷನಲ್ ಸರ್ಟಿಫಿಕೇಟ್ಗಳ ಮೇಲೆ ಹಾಕಿಸಿ, ಅವರು ತಮ್ಮ ಹುದ್ದೆ ಮತ್ತು ಅಧಿಕಾರಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕೋವಿಡ್ ಲಸಿಕೆ ತಯಾರಕರಿಗೆ ಸಲ್ಲಬೇಕಾದ ಶ್ರೇಯಸ್ಸನ್ನು ಕದಿಯುತ್ತಿದ್ದಾರೆ. ಜೊತೆಗೆ ನಿಸ್ವಾರ್ಥ ವೈದ್ಯರು, ನರ್ಸ್ಗಳು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರ ದೊಡ್ಡ ಸೇನೆಗೆ ನೀಡಬೇಕಾದ ಕ್ರೆಡಿಟ್ಅನ್ನು ತಾವು ಪಡೆಯುತ್ತಿದ್ದಾರೆ” ಎಂದು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಬ್ರೇನ್ ಹೇಳಿದ್ದಾರೆ.
“ಚುನಾವಣೆ ಘೋಷಣೆಯಾದ ನಂತರ, ಪ್ರಧಾನಿಯು ಈ ರೀತಿ ತಮ್ಮ ಹೆಸರನ್ನು ಪ್ರಚಾರ ಮಾಡುವಹಾಗಿಲ್ಲ ಮತ್ತು ಈ ರೀತಿಯಾಗಿ ಲಸಿಕೆಯ ಪ್ಲಾಟ್ಫಾರಂ ಆದ ಕೋ-ವಿನ್ ಮೂಲಕ ಕ್ರೆಡಿಟ್ ತೊಗೊಳ್ಳೋ ಹಾಗಿಲ್ಲ” ಎಂದಿರುವ ಟಿಎಂಸಿ ಸಂಸದ, ಇದು ಚುನಾವಣೆಯ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದಿದ್ದಾರೆ. ಹೀಗೆ ಚುನಾವಣಾ ಸಮಯದಲ್ಲಿ ಪ್ರಧಾನಿಯು ತೆರೆಗೆದಾರರ ಖರ್ಚಿನಲ್ಲಿ ಅನಗತ್ಯ ಪ್ರಚಾರ ಮತ್ತು ಅನ್ಯಾಯವಾಗಿ ಪ್ರಯೋಜನ ಪಡೆದುಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಬ್ರೇನ್ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹೆಂಡತಿಯೇನು ಗಂಡನ ಗುಲಾಮಳೆ? ಏನು ಅಂದುಕೊಂದ್ದೀರಿ ನೀವು- ಪತಿ ಮಹಾಶಯನಿಗೆ ಸುಪ್ರೀಂ ಚಾಟಿ
ಈ ರೀತಿಯ ಸರ್ಟಿಫಿಕೇಟ್ಗಳನ್ನು ಕರೊನಾ ಲಸಿಕಾ ಅಭಿಯಾನದ ಮೊದಲ ದಿನದಿಂದಲೇ ನೀಡಲಾಗುತ್ತಿದೆ. ಲಸಿಕೆ ಪಡೆದ ಎಲ್ಲಾ ಆರೋಗ್ಯ ಕಾರ್ಯಕರ್ತರೂ ಮುಂಚೂಣಿ ಕಾರ್ಯಕರ್ತರಿಗೂ ಇದನ್ನು ನೀಡಲಾಗಿದೆ. ಆದರೆ ಇದೀಗ ಪಶ್ಚಿಮ ಬಂಗಾಳವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗಿರುವ ಪ್ರಯುಕ್ತ ಇದು ವಿವಾದದ ವಸ್ತುವಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್ವೇ ಪ್ರೀತಿಯ ಪ್ರಸಂಗ
ಅಧಿಕಾರದ ಬೆನ್ನುಹತ್ತಿ…? ಓಡಿಕೊಂಡು ಪ್ರಚಾರ ಸಭೆಗೆ ಹೋದ ಪ್ರಿಯಾಂಕ!