ಕೊಪ್ಪಳ: ಈ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ಖಾಯಂ ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರು ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅಂದರೆ ಪ್ರತೀ ಬಾರಿಯೂ ಹೊಸ ಶಿಕ್ಷಕರು ಪಾಠ ಮಾಡಲು ಬರುತ್ತಿದ್ದರು. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸದಲ್ಲೂ ತೊಂದರೆ ಕಾಣಿಸಿಕೊಂಡಿದೆ. ಈ ಸಮಸ್ಯೆಯಿಂದ ರೋಸಿ ಹೋದ ಗ್ರಾಮಸ್ಥರು ಕಡೆಗೆ ಸಚಿವ ಹಾಲಪ್ಪ ಆಚಾರ್ರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ಕೊಪ್ಪಳದ ಯಲಬುರ್ಗಾ ತಾಲೂಕಿನ ಚೌಡಾಪೂರ ಗ್ರಾಮದಲ್ಲಿ ನಡೆದಿದ್ದು ಗ್ರಾಮಸ್ಥರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೇ ಕೇವಲ ಅತಿಥಿ ಶಿಕ್ಷಕರಿಂದ ಶಾಲೆ ನಡೆಯುತ್ತಿದ್ದು ಖಾಯಂ ಶಿಕ್ಷಕರ ನೇಮಕಕ್ಕೆ ಹಲವು ಬಾರಿ ಗ್ರಾಮಸ್ಥರು ಸಚಿವ ಆಚಾರ್ಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಕಿಮ್ಮತ್ತೂ ಸಿಗದ ಕಾರಣ ಸಚಿವ ಆಚಾರ್ರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಸಚಿವ ಆಚಾರ್ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದು ‘ನಮಗೆ ನಿಯೋಜನೆ ಬೇಡ, ಖಾಯಂ ಶಿಕ್ಷಕರನ್ನು ನೇಮಿಸಿ ಎಂದಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ಸಚಿವ ಹಾಲಪ್ಪ ಆಚಾರ್ ಕಕ್ಕಾಬಿಕ್ಕಿಯಾಗಿದ್ದಾರೆ. ಕಡೆಗೆ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಶಿಕ್ಷರನ್ನು ನಿಯೋಜನೆ ಮಾಡುವಂತೆ ಹೇಳಿದ್ದಾರೆ.