ಕಾನ್ಪುರ: ಈಚೆಗಷ್ಟೇ ಪೊಲೀಸರ ಎನ್ಕೌಂಟರ್ಗೆ ಹತ್ಯೆಯಾಗಿರುವ ಕುಖ್ಯಾತ ರೌಡಿ ವಿಕಾಸ್ ದುಬೆ ಹಾಗೂ ಬಿಜೆಪಿ ಮುಖಂಡ ಸುಬೋಧ್ ತಿವಾರಿ ಅವರ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಆ್ಯಪ್ ಚಾಟ್ ಇದೀಗ ವೈರಲ್ ಆಗಿದೆ.
ಅವರ ವಾಟ್ಸ್ಆ್ಯಪ್ ಸಂಭಾಷಣೆಯ ಜತೆಗೆ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ. ತಾನು ಪೊಲೀಸರಿಗೆ ಸರೆಂಡರ್ ಆಗಲು ರೆಡಿಯಾಗಿದ್ದೇನೆ ಎಂದಿರುವ ದುಬೆ, ಸುಬೋಧ್ ಅವರಿಂದ ಒಂದಿಷ್ಟು ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ.
ಜುಲೈ 3ರಂದು ಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ನಂತರ ಈ ವಾಟ್ಸ್ಆ್ಯಪ್ ಚಾಟ್ ಹಾಗೂ ಫೋನ್ ಕಾಲ್ಗಳು ನಡೆದಿವೆ ಎನ್ನಲಾಗಿದೆ.
ಇದರಲ್ಲಿ ದುಬೆ, ಸುಬೋಧ್ ತಿವಾರಿ ಅವರಿಂದ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ‘ನನಗೆ 20 ಲಕ್ಷ ರೂಪಾಯಿ ಕೊಡಿ. ಜತೆಗೆ ಒಂದು ಜತೆ ಕಪ್ಪು ಕೋಟ್ (ಸೈಜ್ 40) ಟ್ರೌಸರ್ ಹಾಗೂ ನನ್ನ ಸೈಜ್ನ ಶೂಸ್ (ಗಾತ್ರ 8) ಕೊಡಿಸಿ, ಜತೆಗೆ, ಪೊಲೀಸರಿಗೆ ನಾನು ಶರಣಾಗಲು ಎಲ್ಲ ರೀತಿಯಲ್ಲಿ ನೆರವು ನೀಡಿ. ಇದರ ಬದಲಿಗೆ ನಾನು ನಿಮಗೆ ಕಾನ್ಪುರದಲ್ಲಿ ಇರುವ ಜಮೀನು ಕೊಟ್ಟು 48 ಗಂಟೆಯೊಳಗೇ ನಿಮ್ಮ ಹಣವನ್ನು ಡಬಲ್ ಮಾಡುತ್ತೇನೆ. ಇಷ್ಟೇ ಅಲ್ಲದೇ ನಿಮಗೆ ಏನು ಬೇಕು ಎಲ್ಲ ರೀತಿಯ ಸಹಾಯ ಮಾಡಲು ತಯಾರು ಇದ್ದೇನೆ’ ಎಂದಿದ್ದಾನೆ.
ಇದನ್ನೂ ಓದಿ: ಗಂಡನನ್ನು ನಾನೇ ಸಾಯಿಸಬೇಕೆಂದಿದ್ದೆ: ದುಬೆ ಹೆಂಡತಿ ಉವಾಚ..!
ನಾಡಿದ್ದು ನಾನು ಇದನ್ನು ಧರಿಸಿ ಕೋರ್ಟ್ಮುಂದೆ ಬರುತ್ತೇನೆ ಎಂದು ಚಾಟ್ನಲ್ಲಿ ಉಲ್ಲೇಖಿಸಿದ್ದ ದುಬೆ. ಇದನ್ನು ನೋಡಿದರೆ ಲಾಯರ್ ಗೆಟಪ್ನಲ್ಲಿ ಆತ ಶರಣಾಗಲು ಬಯಸಿದ್ದ ಎನ್ನುವಂತೆ ಕಾಣಿಸುತ್ತಿದೆ.
ಈ ಪ್ರಕರಣದಲ್ಲಿ ಸಮಾಜವಾದಿ ನಾಯಕ ಇರ್ಫಾನ್ ಸೋಲಂಕಿ ಅವರ ಹೆಸರೂ ಕೇಳಿಬರುತ್ತಿದ್ದು, ಇದರ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಬೋಧ್ ತಿವಾರಿ ಅವರು ವಾಟ್ಸ್ಆ್ಯಪ್ ಚಾಟ್ ಮತ್ತು ಕರೆಯಲ್ಲಿನ ಸಂಭಾಷಣೆಯ ವಿವರಗಳನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ (ಎಸ್ಟಿಎಫ್) ಜತೆಗೆ ಈಗಾಗಲೇ ಹಂಚಿಕೊಂಡಿದ್ದೇನೆ ಎಂದಿದ್ದಾರೆ.
ದುಬೆ ಎನ್ಕೌಂಟರ್ ತನಿಖೆಗೆ ಜಡ್ಜ್ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!