ನವದೆಹಲಿ: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ ಬರುವುದು ಸಾಮಾನ್ಯ. ಅತಿಯಾದ ತಾಪಮಾನದಿಂದ ಸಾಯುವ ಸಾಧ್ಯತೆ ಇರುವುದರಿಂದ ತಮ್ಮ ದೇಹವನ್ನು ತಂಪು ಮಾಡಿಕೊಂಡು ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಟ್ಟಲು ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಇದೀಗ ಬಿರು ಬೇಸಿಗೆ ಆರಂಭವಾಗಿರುವುದಿಂದ ಜನರು ತುಂಬಾ ಜಾಗರೂಕರಾಗಿರಬೇಕು ಎಂಬುದು ಉರಗ ತಜ್ಞರ ಎಚ್ಚರಿಕೆಯಾಗಿದೆ.
ಮಕ್ಕಳಿರುವ ಮನೆಯಲ್ಲಿ ಹಾವಿನ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಜಾಗವಿದ್ದರೂ ಸಾಕು ಹಾವು ಸುಲಭವಾಗಿ ಮನೆಯೊಳಗೆ ಪ್ರವೇಶ ಮಾಡುತ್ತದೆ. ಕೆಲವರು ಹಾವನ್ನು ನೋಡುತ್ತಿದ್ದಂತೆ ಮೊದಲು ಮಾಡುವ ಕೆಲಸವೆಂದರೆ, ಬೆಳ್ಳುಳ್ಳಿಯನ್ನು ಜಜ್ಜಿ, ನೀರಿನೊಂದಿಗೆ ಮಿಶ್ರಣ ಮಾಡಿ ಹಾವಿನ ಸುತ್ತಮುತ್ತ ಸಿಂಪಡಿಸುತ್ತಾರೆ. ಹೀಗೆ ಮಾಡಿದರೆ ಹಾವು ಹತ್ತಿರ ಬರುವುದಿಲ್ಲ ಎಂಬ ನಂಬಿಕೆ ಇದೆ.
ಆದರೆ, ಉರಗ ತಜ್ಞ ವಾವಾ ಸುರೇಶ್ ಪ್ರಕಾರ ನೀರಿನ ಜತೆಗೆ ಬೆಳ್ಳುಳ್ಳಿ ರಸ ಮಿಶ್ರಣ ಮಾಡಿ, ಸಿಂಪಡಿಸಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಏಕೆಂದರೆ, ಬೆಳ್ಳುಳ್ಳಿ ಮತ್ತು ಹಾವಿನ ನಡುವೆ ಯಾವುದೇ ಸಂಪರ್ಕ ಇಲ್ಲ. ಆದರೆ, ಸೀಮೆಎಣ್ಣೆ ಮತ್ತು ನೀರು ಕೆಲಸ ಮಾಡುತ್ತದೆ. ಇದನ್ನು ನಾನು ಪ್ರಯತ್ನಿಸಿದ್ದೇನೆ ಎಂದು ವಾವಾ ಸುರೇಶ್ ಹೇಳಿದ್ದಾರೆ.
ಶೇ. 95 ರಷ್ಟು ಹಾವುಗಳು ಇತರೆ ಹಾವುಗಳು ಪ್ರಯಾಣ ಮಾಡಿದ ಹಾದಿಯಲ್ಲಿ ಸಂಚರಿಸುತ್ತವೆ. ಇಲಿಯ ಮೂತ್ರದ ವಾಸನೆಯನ್ನು ಹಾವು ತನ್ನ ನಾಲಿಗೆಯಿಂದ ಪತ್ತೆ ಮಾಡುತ್ತದೆ. ಆದರೆ ಸೀಮೆಎಣ್ಣೆ ಸಿಂಪಡಿಸಿದ ನಂತರ ಹಾವಿಗೆ ವಾಸನೆ ತಿಳಿಯುವುದಿಲ್ಲ. ಹೀಗಾಗಿ ಅದು ತನ್ನ ಹಾದಿಯನ್ನು ಬದಲಾಯಿಸುತ್ತದೆ ಎಂದು ವಾವಾ ಸುರೇಶ್ ಮಾಹಿತಿ ನೀಡಿದರು.
ಬೇಸಿಗೆ ಕಾಲದಲ್ಲಿ ಹಾವುಗಳು ತಂಪಾದ ಸ್ಥಳ ಅರಸಿ ಬರುವುದರಿಂದ ನಿಮ್ಮ ದೈನಂದಿನ ಜೀವನವನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ. ಹೀಗಾಗಿ ನೀವು ಕೆಲವೊಂದು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಆ ಕ್ರಮಗಳು ಈ ಕೆಳಕಂಡಂತಿವೆ.
1. ಮನೆ ಬಳಿ ಕಸದ ರಾಶಿ ಹಾಕಬೇಡಿ. ಕಸದ ರಾಶಿ ಬಿದ್ದಿರುವ ಜಾಗದಲ್ಲಿ ಹಾವುಗಳು ತಂಪು ಪಡೆಯಲು ಬರುತ್ತವೆ.
2. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನೆರಳು ಮತ್ತು ತಂಪು ನೀಡುವ ವಸ್ತುಗಳನ್ನು ಮನೆಯ ಹೊರಂಗಾಣದಲ್ಲಿ ಸಂಗ್ರಹಿಸಿ ಇಡಬೇಡಿ. ಮನೆಯೊಳಗೆ ಸ್ವಚ್ಛತೆ ಇರಲಿ.
3. ಶೂಗಳನ್ನು ಮೊದಲು ಪರಿಶೀಲಿಸಿ ಆನಂತರ ಧರಿಸಿ
4. ರಾತ್ರಿಯ ವೇಳೆ ತುಂಬಾ ಎಚ್ಚರಿಕೆಯಿಂದ ನಡೆಯಿರಿ. ಬ್ಯಾಟರಿ ಅಥವಾ ಮೊಬೈಲ್ ಟಾರ್ಚ್ ಬಳಸುವುದು ಉತ್ತಮ.
5. ಹಾವು ಕಡಿತಕ್ಕೆ ಒಳಗಾಗುವ ವ್ಯಕ್ತಿಯನ್ನು ನೋಡಿ ಭಯಪಡದೇ ಸಾಧ್ಯವಾದಷ್ಟು ಬೇಗ ಅವರನ್ನು ಆಸ್ಪತ್ರೆಗೆ ದಾಖಲಿಸಿ.
ಎಲ್ಲಿಯೇ ಆಗಲಿ ಹಾವುಗಳನ್ನು ಕಂಡಾಗ ಮೊದಲ ಉರಗ ಪ್ರೇಮಿಗಳಿಗೆ ಕರೆ ಮಾಡಿ. ಹಾವುಗಳನ್ನು ಯಾವುದೇ ಕಾರಣಕ್ಕೂ ಸಾಯಿಸಬೇಡಿ. ಉರಗ ಪ್ರೇಮಿಗಳು ಬಂದು ಹಾವನ್ನು ರಕ್ಷಣೆ ಮಾಡಿ, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುತ್ತಾರೆ. (ಏಜೆನ್ಸೀಸ್)
ಬರೋಬ್ಬರಿ 30 ಯುವಕರಿಗೆ ವಂಚಿಸಿದ ಮಾಯಾಂಗನೆ! ಕಳಚಿಬಿತ್ತು ಲೇಡಿ ಪೊಲೀಸ್ ಮುಖವಾಡ
ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್ವುಡ್ನ ಸ್ಟಾರ್ ನಟಿ! ಯಾರೆಂದು ಪತ್ತೆ ಹಚ್ಚುವಿರಾ?