ಹೊಸಪೇಟೆ: ಅಸ್ವಚ್ಛತೆ ದೂರು ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೈಕಲ್ನಲ್ಲಿ ಸುತ್ತಾಡಿ ಸ್ವಚ್ಛತೆ ಪರಿಶೀಲಿಸಿದರು.
ಮೂಲ ಸೌಕರ್ಯಗಳ ಕುರಿತು ನಾಗರಿಕರಿಂದ ಮಾಹಿತಿ
ಕಸ ವಿಲೇವಾರಿ, ಒಳಚರಂಡಿ, ಕುಡಿವ ನೀರಿನ ಲಭ್ಯತೆ, ಬೀದಿ ನಾಯಿಗಳ ಹಾವಳಿ, ಒತ್ತುವರಿ, ಸಮುದಾಯ ಶೌಚಗೃಹಗಳ ಸ್ವಚ್ಛತೆ, ಕೇಂದ್ರ ಬಸ್ ನಿಲ್ದಾಣದಲ್ಲಿರುವ ಶೌಚಗೃಹದ ಸ್ವಚ್ಛತೆ ಮತ್ತು ಇತರ ಮೂಲ ಸೌಕರ್ಯಗಳ ಕುರಿತು ನಾಗರಿಕರಿಂದ ಮಾಹಿತಿ ಪಡೆದರು. ನಂತರ ಡಿಸಿ, ನಿರ್ಲಕ್ಷ್ಯ ವಹಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಂತರ ನಗರಸಭೆಯಿಂದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಡಲಾಯಿತು.
ಸ್ವಚ್ಛತೆ ಒಂದು ದಿನಕ್ಕೆ ನಿಲ್ಲಬಾರದು.
ಸೈಕಲ್ ಸವಾರಿ ಸಂಡೂರು ರಸ್ತೆಯಿಂದ, ಎಪಿಎಂಸಿ, ಸಾಯಿಬಾಬಾ ವೃತ್ತ, ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಇಂದಿರಾನಗರ ಮೂಲಕ ಕೇಂದ್ರ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಗಾಂಧಿ ವೃತ್ತ ಸೇರಿದಂತೆ ಇತರೆ ಕಡೆ ಸಾಗಿತು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಸ್ವಚ್ಛತೆ ಒಂದು ದಿನಕ್ಕೆ ನಿಲ್ಲಬಾರದು. ನಿರಂತರವಾಗಿ ಮುಂದುವರೆಯಬೇಕು ಎಂದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈರಣ್ಣ ಬಿರಾದಾರ, ನಗರಸಭೆ ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್ ಇತರರಿದ್ದರು.