ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಜನರೇಟರ್ ಆನ್ ಮಾಡದ ಕಾರಣ ಆಕ್ಸಿಜನ್ ಸಿಗದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂಬ ಆರೋಪಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು, ಆಕ್ಸಿಜನ್ ಸರಬರಾಜಿನ ಕೊರತೆಯಿಂದ ವ್ಯಕ್ತಿ ಮೃತಪಟ್ಟಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇವನಹಳ್ಳಿ ತಾಲೂಕು ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕರಿನಾಯಕನಹಳ್ಳಿ ಗ್ರಾಮದ ಸುರೇಶ್ ಎಂಬುವರು ಸಾವಪ್ಪಿದ್ದರು. ಈ ಸಾವಿಗೆ ವಿದ್ಯುತ್ ಕಡಿತವಾದಾಗ ಆಕ್ಸಿಜನ್ ಸರಬರಾಜು ನಿಂತಿದ್ದೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿಗಳು, ಸದರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೆಂಟಿಲೇಟರ್ಗಳಿದ್ದು, ವಿದ್ಯುತ್ ಸರಬರಾಜು ಇಲ್ಲದಿದ್ದರೂ 30 ನಿಮಿಷ ಆಕ್ಸಿಜನ್ ಸರಬರಾಜು ಇರುವ ಸೌಲಭ್ಯ ಹೊಂದಿದೆ. ಕಳೆದ ಎರಡು ದಿನಗಳಿಂದ ಮೃತ ಕರೊನಾ ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಸಾವನ್ನಪಿದ್ದಾರೆ. ಅವರ ಆಕ್ಸಿಜನ್ ಸ್ಯಾಚುರೇಶನ್ ಪ್ರಮಾಣ ಸಾಯುವ ವೇಳೆ ತೀರ ಕಡಿಮೆ ಇತ್ತು ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದು, ಮೃತ ವ್ಯಕ್ತಿಯು ಮೇ 12 ರಂದು ಆಕ್ಸಿಜನ್ ಸ್ಯಾಚುರೇಶನ್ ಮಟ್ಟ 56 ಇರುವಾಗ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಮೇ 17 ರಿಂದ ವೆಂಟಿಲೇಟರ್ ಸೌಲಭ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು(ಮೇ 23) ಬೆಳಗ್ಗೆ 10:55 ಕ್ಕೆ ಮೃತಪಟ್ಟಿದ್ದಾರೆ. ಈ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾದ ಕಾರಣ ವ್ಯಕ್ತಿ ಆಕ್ಸಿಜನ್ ಸರಬರಾಜಿನ ಕೊರತೆಯಿಂದ ಮೃತಪಟ್ಟಿರುತ್ತಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ 30 ನಿಮಿಷ ವಿದ್ಯುತ್ ಸರಬರಾಜು ಇಲ್ಲದಿದ್ದರೂ ವೆಂಟಿಲೇಟರ್ಗಳು ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ನಕಲಿ ಗುರುತಿನೊಂದಿಗೆ ಪಾಕಿಸ್ತಾನೀಯರೊಂದಿಗೆ ಸಂಪರ್ಕ; ಗೂಢಚಾರಿಕೆಯ ಶಂಕೆಯಲ್ಲಿ ಇಬ್ಬರು ಮಹಿಳೆಯರ ಬಂಧನ
ಸಿಬಿಎಸ್ಇ 12ನೇ ತರಗತಿ : ಮೇಜರ್ ಸಬ್ಜೆಕ್ಟ್ಗಳಿಗೆ ಮಾತ್ರ ಪರೀಕ್ಷೆ ನಡೆಸುವ ಚಿಂತನೆ ?!