`ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಚಾಮುಂಡಿ ತಾಯಿಯ ಅಪ್ಪಟ ಭಕ್ತ ಎಂದು ಎಲ್ಲರಿಗೂ ಗೊತ್ತೇ ಇದೆ. ಆಗಾಗ ಚಾಮುಂಡಿ ಬೆಟ್ಟಕ್ಕೆ ಹೋಗಿ, ಚಾಮುಂಡೇಶ್ವರಿಯ ದರ್ಶನ ಪಡೆದು ಬರುತ್ತಿರುತ್ತಾರೆ.
ಅದರಲ್ಲೂ ಆಷಾಢ ಬಂತೆಂದರೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಅದೇ ರೀತಿ, ಇಂದು (ಆಷಾಢದ ಮೂರನೆಯ ಶುಕ್ರವಾರ) ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಇದನ್ನೂ ಓದಿ: ನಾನು ಪೂಜಿಸುವ ನಾಲ್ಕು ದೇವರುಗಳ ಪೈಕಿ ಅವರೂ ಒಬ್ಬರು …
ಪ್ರತಿ ವರ್ಷ ದರ್ಶನ್ ಅವರು ಆಷಾಢದ ಮೊದಲ ಶುಕ್ರವಾರದಂದು ದೇವಸ್ಥಾನಕ್ಕೆ ಭೇಟಿ ನೀಡಿ ಶಕ್ತಿದೇವಿಗೆ ಪೂಜೆ ಸಲ್ಲಿಸಿ ಬರುತ್ತಿದ್ದರು. ಆದರೆ, ಈ ಬಾರಿ ಲಾಕ್ಡೌನ್ ಇದ್ದುದರಿಂದ, ಮೊದಲ ಶುಕ್ರವಾರ ಅವರಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಲು ಆಗಿರಲಿಲ್ಲ. ಇದೀಗ ದೇವಸ್ಥಾನವನ್ನು ತೆಗೆಯಲಾಗಿದೆ. ಹಾಗಾಗಿ ದರ್ಶನ್ ತಮ್ಮ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಬಂದಿದ್ದಾರೆ.
ಈಗ ಎಲ್ಲೆಲ್ಲೂ ಕರೊನಾ ಹರಡುವ ಭೀತಿ ಹೆಚ್ಚಾಗಿರುವುದರಿಂದ ದರ್ಶನ್, ಮಾಸ್ಕ್ ಧರಿಸಿ ದೇವರ ದರ್ಶನ ಮಾಡಿದ್ದಾರೆ. ಆಷಾಢದ ಶುಕ್ರವಾರವಾದ್ದರಿಂದ ದೇವಸ್ಥಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಅವರ ಮಧ್ಯೆಯೇ, ದರ್ಶನ್ ಸಹ ದೇವರ ದರ್ಶನ ಮಾಡಿ ಬಂದಿದ್ದಾರೆ.
ಇದನ್ನೂ ಓದಿ: ಹಾಡುಗಳ ಕಂಪೋಸಿಂಗ್ ಮುಗೀತು; ಚಿತ್ರೀಕರಣ ಶುರುವಾಗುವುದೊಂದೇ ಬಾಕಿ
ಲಾಕ್ಡೌನ್ ಶುರುವಾದಾಗಿನಿಂದ ಮೈಸೂರಿನ ತಮ್ಮ ಫಾರ್ಮ್ ಹೌಸ್ನಲ್ಲೇ ಇರುವ ದರ್ಶನ್, ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ನಂತರ `ರಾಜವೀರ ಮದಕರಿನಾಯಕ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.