ಚಿತ್ರದುರ್ಗ: ಕೇರಳದ ಶಬರಿಮಲೆ ಯಾತ್ರೆಗೆ ತೆರಳಿ ಹಿಂದಿರುಗಿದ್ದ ಓರ್ವ ಸೇರಿ ಜಿಲ್ಲೆಯ ಐವರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಚಿತ್ರದುರ್ಗ, ಚಳ್ಳಕೆರೆ ತಲಾ 2, ಮೊಳಕಾಲ್ಮುರಿನಲ್ಲಿ 1 ಪ್ರಕರಣ ಪತ್ತೆಯಾಗಿವೆ. ಇನ್ನುಳಿದ ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಲ್ಲಿ ಯಾವುದೇ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ.
ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ವೈರಸ್ ಜೆಎನ್.1 ಸೋಂಕು ಪತ್ತೆಯಾದ ಬಳಿಕ ಜಿಲ್ಲೆಯಲ್ಲಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಇರುವ ಜಿಲ್ಲೆಯ 677 ಮಂದಿಗೆ ಪರೀಕ್ಷಿಸಲಾಗಿದೆ.
ಈಗ ಐವರಲ್ಲಿ ಕೋವಿಡ್-19 ದೃಢಪಟ್ಟಿದ್ದು, ಬೆಂಗಳೂರಿನ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಜೆಎನ್.1 ಪಾಸಿಟಿವ್ ಅಥವಾ ನೆಗೆಟಿವ್ ಎಂಬುದು ತಿಳಿಯಲಿದೆ. ಸೋಂಕಿತರು ಗೃಹ ಆರೈಕೆಯಲ್ಲಿದ್ದು, ಆರೋಗ್ಯದ ಮೇಲೆ ಇಲಾಖೆ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್ ತಿಳಿಸಿದ್ದಾರೆ.