ಬರೇಲಿ: ಕಬಾಬ್ ರುಚಿ ಚೆನ್ನಾಗಿರಲಿಲ್ಲ ಹಾಗೂ ಬಿಲ್ ಪಾವತಿಸಲು ಸೂಚಿಸಿದರು ಎಂಬ ಕಾರಣಕ್ಕೆ ಅಡುಗೆ ಭಟ್ಟನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಘಟನೆಯೂ ಬರೇಲಿಯ ಪ್ರಿಯದರ್ಶಿನಿ ನಗರದಲ್ಲಿ ನಡೆದಿದ್ದು ಮೃತ ದುರ್ದೈವಿಯನ್ನು ಅಂಕುರ್ ಸಬರ್ವಾಲ್(52) ಎಂದು ಗುರುತು ಹಿಡಿಯಲಾಗಿದೆ.
ಕಳಪೆ ಆಹಾರ ಎಂದು ಖ್ಯಾತೆ
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಕುಡಿದ ಮತ್ತಿನಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮೊದಲಿಗೆ ಕಬಾಬ್ ಆರ್ಡರ್ ಮಾಡಿ ತರಿಸಿಕೊಂಡು ತಿಂದಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮಿರದಲ್ಲಿ ಸೇನಾ ಹೆಲಿಕಾಪ್ಟರ್ ಪತನ; ಇಬ್ಬರಿಗೆ ಗಾಯ
ಆ ನಂತರ ಅಂಗಡಿ ಮಾಲೀಕ ಅಂಕುರ್ ಅವರ ಬಳಿ ಕಳಪೆ ಗುಣಮಟ್ಟದ ಆಹಾರವನ್ನು ನೀಡಿದ್ದೀಯಾ ಎಂದು ಖ್ಯಾತೆ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ತೆರಳಿದ್ದಾರೆ.
ಬಿಲ್ ಕೇಳಿದ್ದಕ್ಕೆ ಹತ್ಯೆ
ಈ ವೇಳೆ ಅಂಕುರ್ ತನ್ನ ಬಳಿ ಕೆಲಸಕ್ಕಿದ್ದ ನಸೀರ್ ಅಹ್ಮದ್ಗೆ ಆರೋಪಿಗಳ ಬಳಿ ಕಬಾಬ್ ಬಿಲ್ 120 ರೂಪಾಯಿಯನ್ನು ತೆಗೆದುಕೊಂಡು ಬರುವಂತೆ ಸೂಚಿಸಿದಾಗ ಕುಪಿತಗೊಂಡ ಆರೋಪಿಗಳು ಅಂಗಡಿ ಮಾಲೀಕ ಅಂಕುರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ತೀವ್ರ ರಕ್ತಸ್ರಾವದಿಂದ ಅಂಗಡಿ ಮಾಲೀಕ ಅಂಕುರ್ ಸಬರ್ವಾಲ್ ಸ್ಥಳದಲ್ಲೇ ಸಾವಿಗೀಡಾಗಿದ್ದು ಹತ್ಯೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಕಾರನ್ನು ಉತ್ತರಾಖಂಡದ ಕಾಶಿಪುರದಲ್ಲಿ ಪತ್ತೆ ಹಚ್ಚಲಾಗಿದೆ.
ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಅವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಮಾಹಿತಿ ನೀಡಿದ್ದಾರೆ.