ಲಖನೌ: ಬಿಹಾರದಿಂದ ಉತ್ತರಪ್ರದೇಶದಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 95 ಮಕ್ಕಳನ್ನು ಮಕ್ಕಳ ಆಯೋಗ ರಕ್ಷಿಸಿದೆ. ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ CWC ಅಧಿಕಾರಿ ಸರ್ವೇಶ್ ಅವಸ್ತಿ, ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಉತ್ತರಪ್ರದೇಶ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರು ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಕ್ಕಳನ್ನು ರಕ್ಷಿಸಿ ಆಹಾರ ಮತ್ತು ವೈದ್ಯಕೀಯ ಸೇವೆಯನ್ನು ನೀಡಿದ್ದಾರೆ.
ರಕ್ಷಿಸಲ್ಪಟ್ಟ ಮಕ್ಕಳೆಲ್ಲಾ ಸುಮಾರು 4-12 ವಯಸ್ಸಿನವರು ಎಂದು ತಿಳಿದು ಬಂದಿದ್ದು, ಪೋಷಕರಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ವರದಿಯಾಗಿದೆ. ಎಲ್ಲಿಗೆ ಕರೆದೊಯ್ಯಲಾಗುತ್ತಿತ್ತು ಎಂದು ಮಾಹಿತಿ ದೊರೆತ್ತಿಲ್ಲ. ಪೋಷಕರನ್ನು ಸಂಪರ್ಕಿಸಲಾಗುತ್ತಿದ್ದು, ಶೀಘ್ರದಲ್ಲೇ ಮಕ್ಕಳನ್ನು ಪಾಲಕರ ಮಡಿಲಿಗೆ ಒಪ್ಪಿಸಲಾಗುವುದು ಎಂದು CWC ಅಧಿಕಾರಿ ಸರ್ವೇಶ್ ಅವಸ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್ಆರ್ಎಚ್ ವಿರುದ್ಧ ಕೊಹ್ಲಿ ನಿಧಾನಗತಿಯ ಆಟ; ಮಾಜಿ ನಾಯಕ ಹೇಳಿದ್ದಿಷ್ಟು
ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ, ಬಿಹಾರದಿಂದ ಬೇರೆ ರಾಜ್ಯಗಳ ಮದರಸಾಗಳಿಗೆ ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ನಮಗೆ ಮಾಹಿತಿ ದೊರೆತಿತ್ತು. ಉತ್ತರಪ್ರದೇಶ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಸಹಕಾರದಿಂದ ಅವರನ್ನು ರಕ್ಷಿಸಲಾಗಿದೆ.
ಭಾರತದ ಸಂವಿಧಾನವು ಪ್ರತಿ ಮಗುವಿಗೆ ಶಿಕ್ಷಣದ ಹಕ್ಕನ್ನು ನೀಡಿದೆ, ಪ್ರತಿ ಮಗು ಶಾಲೆಗೆ ಹೋಗುವುದು ಕಡ್ಡಾಯವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಬಡ ಮಕ್ಕಳನ್ನು ಬೇರೆ ರಾಜ್ಯಗಳಿಗೆ ಕರೆದೊಯ್ದು ಮದರಸಾಗಳಲ್ಲಿ ಇರಿಸಿಕೊಂಡು ಧರ್ಮದ ಆಧಾರದ ಮೇಲೆ ದೇಣಿಗೆ ಪಡೆಯುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ತಿಳಿಸಿದ್ದಾರೆ.