ಬೆಂಗಳೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಚರ್ಚಿಸಲು ಪ್ರತಿಭಟನಾನಿರತ ಮುಖಂಡರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತುಕತೆಗೆ ಆಹ್ವಾನಿಸಿದ್ದಾರೆ. ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಬಿಎಸ್ ವೈ ತಿದ್ದುಪಡಿ ಕಾಯ್ದೆ ಬಗ್ಗೆ ತಪ್ಪುಗ್ರಹಿಕೆಯಿಂದಾಗಿ ಚಳವಳಿಗೆ ಇಳಿದಿದ್ದಾರೆ. ನಾಲ್ಕೈದು ಮುಖಂಡರನ್ನು ಮಾತುಕತೆಗೆ ಕರೆದಿದ್ದು, ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವೆ ಎಂದು ಸ್ಪಷ್ಟಪಡಿಸಿದರು.
ನೀರಾವರಿ ಭೂಮಿಯನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ಕೊಟ್ಟಿಲ್ಲ. ರಾಜ್ಯದಲ್ಲಿ ಈವರೆಗೆ ಶೇ.2ರಷ್ಟು ಕೃಷಿ ಭೂಮಿ ಮಾತ್ರ ಕೈಗಾರಿಕೆಗಳಿಗೆ ಮಂಜೂರು ಮಾಡಲಾಗಿದೆ. ಕೃಷಿ ಮತ್ತು ಕೈಗಾರಿಕೆ ಮಧ್ಯೆ ಸಮತೋಲನದ ಬೆಳವಣಿಗೆ, ಉತ್ತೇಜನ ನೀಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಬಿಎಸ್ ವೈ ವಿವರಿಸಿದರು.
ಇದನ್ನೂ ಓದಿ: ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ
ಅವಿಶ್ವಾಸಕ್ಕೆ ಅಭ್ಯಂತರವಿಲ್ಲ: ಪ್ರತಿಪಕ್ಷಗಳ ತಂದಿರುವ ಅವಿಶ್ವಾಸ ಗೊತ್ತುವಳಿಗೆ ಅಭ್ಯಂತರವಿಲ್ಲ. ಪ್ರತಿ 6 ತಿಂಗಳಿಗೊಮ್ಮೆ ಅವಿಶ್ವಾಸ ಮಂಡಿಸಲು ನಿಯಮಗಳಲ್ಲಿ ಅವಕಾಶವಿದೆ. ಅದನ್ನು ಖಂಡಿತವಾಗಿ ಬಳಸಿಕೊಳ್ಳಲಿ, ಯಾವುದೇ ಸಮಸ್ಯೆಯಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಬಿಎಸ್ ವೈ ಪ್ರತಿಕ್ರಿಯಿಸಿದರು.