ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಕಾನೂನುಗಳ ಜಾರಿಗೆ ಆಗ್ರಹಿಸಿ ರೈತರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪೊಲೀಸರ ಜತೆ ಉಂಟಾದ ಸಂಘರ್ಷದಲ್ಲಿ ರೈತರೊಬ್ಬರು ಮೃತಪಟ್ಟಿದ್ದು, ಸಂತಾಪ ದ ಭಾಗವಾಗಿ ಮುಂದಿನ ಎರಡು ದಿನ ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಾಗಿ ರೈತ ಸಂಘಟನೆಗಳ ನಾಯಕರು ತಿಳಿಸಿದ್ದಾರೆ.
ರೈತರ ಬೇಡಿಕೆ ಈಡೇರಿಸುವಂತೆ ಪಂಜಾಬ್ನ ಗಡಿ ಪ್ರದೇಶಗಳಾದ ಶಂಭು ಹಾಗೂ ಖನೌರಿಯಲ್ಲಿ ಜಮಾಯಿಸಿರುವ ರೈತರ ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಬುಧವಾರ ಅಶ್ರುವಾಯು ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: ಹಿಂದೂಗಳ ಬಗ್ಗೆ ಅವಹೇಳನಕಾರಿ ಪೋಸ್ಟ್; ಕ್ಷಮೆ ಕೇಳಿದ 12th ಫೇಲ್ ನಾಯಕ ನಟ
ಪಂಜಾಬ್ನ ಗಡಿ ಪ್ರದೇಶಗಳಾದ ಶಂಭು ಹಾಗೂ ಖನೌರಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಡ್ರೋನ್ಗಳ ಮೂಲಕ ಅಶ್ರುವಾಯು ಪ್ರಯೋಗಿಸಿದರು. ಈ ವೇಳೆ ಆವರಿಸಿದ ದಟ್ಟ ಹೊಗೆಯಿಂದ ಪಾರಾಗಲು ರೈತರು ಮುಖಗವಸು ಹಾಗೂ ಕನ್ನಡಕಗಳನ್ನು ತೊಟ್ಟು ಸುರಕ್ಷಿತ ಸ್ಥಳಗಳತ್ತ ಓಡಲು ಶುರು ಮಾಡಿದ್ದಾರೆ.
ಈ ವೇಳೆ ಅಖಿಲ ಭಾರತ ಕಿಸಾನ್ ಸಭಾದ (AIKS) ಸಂಘಟನೆಯ ಮುಖಂಡರೊಬ್ಬರು ಗುಂಡು ತಗುಲಿ ಮೃತಪಟ್ಟಿದ್ದಾರೆ. ಮೃತರನ್ನು ಬಟಿಂಡಾ ಮೂಲದ ಶುಭಕರಣ್ ಸಿಂಗ್ (21) ಎಂದು ಗುರುತಿಸಲಾಗಿದ್ದು, ಇವರ ಸಾವಿಗೆ ಪೊಲೀಸರೇ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿವೆ.