ಚಿತ್ರದುರ್ಗ: ರಾಜ್ಯದ ಬೇಚರಾಕ್ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಯಲ್ಲಿ ಮಾತನಾಡಿ ಅಧಿಕಾರಿಗಳ ನಡೆಗೆ ಆಕ್ಷೇಪಿಸಿದರು.
2014 ಕ್ಕೂ ಮೊದಲಿದ್ದ ಬೇಚರಾಕ್ಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಈ ಹಿಂದಿನ ಸರ್ಕಾರ ಆದೇಶಿಸಿತ್ತು. ಅಂತಿಮ ಅಧಿಸೂಚನೆ ನಂತರವೂ ಸಾವಿರಾರು ಗ್ರಾಮಗಳ ಪೈಕಿ ಎರಡು ಮಾತ್ರ ಕಂದಾಯ ಗ್ರಾಮಗಳಾಗಿವೆ ಎಂದರು.
ಹೊಸ ಆದೇಶದಂತೆ 10ಕ್ಕೂ ಹೆಚ್ಚು ಮನೆಗಳಿರುವ ಬೇಚರಾಕ್ ಗ್ರಾಮಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸಾಧ್ಯವಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ತರಬೇತಿ ಸಂಸ್ಥೆ ಕಟ್ಟಡವನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ತಾತ್ಕಾಲಿಕವಾಗಿ ಕೊಡುವಂತೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ಪತ್ರ ಬರೆಯಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಸಿಎಸ್ಆರ್ ಫಂಡ್ನಿಂದ ಶಾಲಾ ಕಾಲೇಜು ಅಭಿವೃದ್ಧಿ ಕುರಿತು ಚರ್ಚಿಸಿರುವುದಾಗಿ ತಿಳಿಸಿದರು.
ಡಿಸಿ ಆರ್.ವಿನೋತ್ಪ್ರಿಯಾ, ಎಡಿಸಿ ಸಿ.ಸಂಗಪ್ಪ, ಡಿಡಿಪಿಐ ಕೆ.ರವಿಶಂಕರ್ರೆಡ್ಡಿ, ಲೋಕೋಪಯೋಗಿ ಇಲಾಖೆ ಇಇ ಸತೀಶ್, ಜೆ.ಸಿ.ವೆಂಕಟೇಶಯ್ಯ, ಸತ್ಯನಾರಾಯಣ , ತಾಲೂಕುಗಳ ತಹಸೀಲ್ದಾರರು ಇದ್ದರು.
ಬಜೆಟ್ನಲ್ಲಿ ರೈಲಿಗೆ ಹಣ; ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಅನುಷ್ಠಾನ ವಿಳಂಬ ಒಪ್ಪಿಕೊಂಡ ಸಂಸದರು, ಈ ಬಜೆಟ್ನಲ್ಲಿ ಅಗತ್ಯ ಅನುದಾನ ಮಂಜೂರು ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮನವಿ ಮಾಡಲಾಗುವುದು ಎಂದರು.
ನಾನು ಗುಮಾಸ್ತ ಅಲ್ಲ: ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಸಂಸದರು, ನಾನು ಗುಮಾಸ್ತ ಅಲ್ಲ. ನನ್ನ ಹಿಂದಿನ ಕಾರ್ಯಶೈಲಿ ಗೊತ್ತಿಲ್ಲದಿದ್ದರೇ ಕೇಳಿ ತಿಳಿದುಕೊಳ್ಳಿ. 10 ವರ್ಷಗಳಾದರೂ ನೀವು ಕೆಲಸ ಮಾಡಲ್ಲ. ನಿಮಗೆ ಬದ್ಧತೆ ಇರಬೇಕು. ನೀವು ಯಾರಿಗೆ ಉತ್ತರ ದಾಯಿಗಳಾಗಿದ್ದೀರಿ ಎಂದು ಪ್ರಶ್ನಿಸಿದರು.