ಬೆಂಗಳೂರು: ಕಾಟೇರ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಬಾರಿ ಸದ್ದು ಮಾಡಿದಾಗಿನಿಂದ ನಟ ದರ್ಶನ್ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಹಾಗೂ ಪವಿತ್ರ ಗೌಡ ಜಗಳ ಬೀದಿಗೆ ಬಂದು ದರ್ಶನ್, ಮುಜುಗರಕ್ಕೀಡಾಗುವಂತೆ ಮಾಡಿತು. ಇದಾದ ಬಳಿಕ ಮಂಡ್ಯದಲ್ಲಿ ಮಹಿಳೆಯರ ಬಗ್ಗೆ ಮಾತನಾಡಿ ಕೆಂಗಣ್ಣಿಗೆ ಗುರಿಯಾದರು. ಇದಾದ ಬಳಿಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರನ್ನು ತಗಡು ಎನ್ನುವ ಮೂಲಕ ಮತ್ತೆ ಚರ್ಚೆಗೀಡಾದರು. ಇದೀಗ ಅಶ್ವಿನಿ ಪುನೀತ್ರಾಜ್ಕುಮಾರ್ ಅವರನ್ನು ದರ್ಶನ್ ಅಭಿಮಾನಿ ಹೆಸರಿನ ಎಕ್ಸ್ ಖಾತೆಯಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ್ದು, ಈ ಪ್ರಕರಣ ಕೂಡ ದರ್ಶನ್ ಸುತ್ತ ಸುತ್ತುತ್ತಿದೆ.
ಒಂದಲ್ಲ ಒಂದು ವಿಚಾರಕ್ಕೆ ದರ್ಶನ್ ಸಿಕ್ಕಿಹಾಕಿಕೊಳ್ಳುತ್ತಿರುವುದನ್ನು ನೋಡಿದರೆ, ಅವರ ಟೈಂ ಸರಿಯಿಲ್ಲ ಎಂದು ಅನಿಸುತ್ತದೆ. ಅದಕ್ಕೆ ಪುಷ್ಠಿ ನೀಡುವಂತೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಎರಡು ದಿನಗಳ ಹಿಂದೆ ನುಡಿದಿರುವ ಭವಿಷ್ಯವಾಣಿಯೂ ಕೂಡ ಇದೆ. ದರ್ಶನ್ಗೆ ಈಗ ಸಮಯ ಸರಿಯಿಲ್ಲ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ನಮ್ಮ ಕರ್ನಾಟಕದ ಖ್ಯಾತ ನಟರಾದ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಬಹಳ ಕಷ್ಟದಿಂದ ಮೇಲೆ ಮೇಲೆ ಬಂದಿರುವವರು. ಅವರ ಪ್ರತಿಭೆ ಹಾಗೂ ಅವರು ಪಡೆದಿರುವ ಪ್ರಸಿದ್ಧಿ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ. ಆದರೆ, ಈ ವರ್ಷ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ, ಅನಾರೋಗ್ಯ ಬಾಧೆ, ಮಾನಹಾನಿಗಳು, ಅನೇಕ ರೀತಿಯ ದುಷ್ಕೃತ್ಯಗಳ ಪ್ರಯೋಗದಿಂದ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಮತ್ತು ನಿಮ್ಮ ರಕ್ಷಣಾವಲಯವನ್ನು ಹೆಚ್ಚು ಮಾಡುವುದು ಸೂಕ್ತ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದ್ದಾರೆ.
ಸ್ವಾಮೀಜಿಯ ಮಾತು ಕೇಳಿದರೆ ನಿಜ ಎನಿಸುತ್ತಿದೆ. ಏಕೆಂದರೆ, ಈ ವರ್ಷದ ಆರಂಭದಿಂದಲೂ ದರ್ಶನ್ ಹೆಸರು ಮಾಧ್ಯಮದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಬರೀ ವಿವಾದದ ಕಾರಣಕ್ಕಾಗಿ ದರ್ಶನ್ ಹೆಸರು ತುಂಬಾ ಚರ್ಚೆಯಾಗುತ್ತಿದೆ.
ಕಾಟೇರ ಯಶಸ್ಸಿನ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಗಂಡ ಮತ್ತು ಮಗನೊಂದಿಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ಇದು ನನ್ನ ಕುಟುಂಬ ಎಂದು ಬರೆದುಕೊಳ್ಳುವ ಮೂಲಕ ನನಗೆ ಮಾತ್ರ ಸ್ವಂತ ಎನ್ನುವ ಸಂದೇಶ ರವಾನಿಸಿದ್ದರು. ಇನ್ನೂ ಪವಿತ್ರಾ ಗೌಡ ಮತ್ತು ದರ್ಶನ್ ನಡುವೆ ಪ್ರೇಮ ಸಂಬಂಧ ಇರುವುದು ಬಹುತೇಕರಿಗೆ ತಿಳಿದೇ ಇದೆ. ವಿಜಯಲಕ್ಷ್ಮೀ ಪೋಸ್ಟ್ಗೆ ಕೌಂಟರ್ ಕೊಡುವ ನಿಟ್ಟಿನಲ್ಲಿ ಪವಿತ್ರಾ ಗೌಡ, ದರ್ಶನ್ ಜತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡು 10 ವರ್ಷದ ಸಂಬಂಧ, ಹೀಗೆ ಮುಂದುವರಿಯಲಿ ಎಂದು ಬರೆದುಕೊಂಡಿದ್ದರು. ಇದಾದ ಬಳಿಕ ವಿಜಯಲಕ್ಷ್ಮೀ ಅವರು ಪವಿತ್ರಾ ಗೌಡ ಅವರ ಮಾಜಿ ಪತಿಯ ಫೋಟೋಗಳನ್ನು ಶೇರ್ ಮಾಡಿ, ಪವಿತ್ರಾ ಮಗಳು ದರ್ಶನ್ಗೆ ಹುಟ್ಟಿದ್ದಲ್ಲ ಎನ್ನುವ ಅರ್ಥದಲ್ಲಿ ಗುಡುಗಿದ್ದರು ಮತ್ತು ಪವಿತ್ರಾ ವಿರುದ್ಧ ವೈಯಕ್ತಿಕ ದಾಳಿ ನಡೆಸಿ, ದೂರು ದಾಖಲಿಸುವ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಪವಿತ್ರಾ ಗೌಡ ಕೂಡ ದರ್ಶನ್ ಜತೆಗಿನ ಸಂಬಂಧ ತುಂಬಾ ದಿನಗಳಿಂದ ಇದೆ ಮತ್ತು ವಿಜಯಲಕ್ಷ್ಮೀಗೂ ಗೊತ್ತಿದೆ. ವೈಯಕ್ತಿಕ ತೇಜೋವಧೆ ಮಾಡಲು ಯಾರಿಗೂ ಹಕ್ಕಿಲ್ಲ. ನಾನೂ ಕೂಡ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದರು. ಇದಾದ ಬಳಿಕ ಈ ವಿವಾದ ತಣ್ಣಗಾಯಿತು.
ಇದಾದ ಬಳಿಕ ದರ್ಶನ್ ಅವರು ಸ್ಯಾಂಡಲ್ವುಡ್ಗೆ ಕಾಲಿಟ್ಟು 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದ ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡರು. ಇವತ್ತು ಇವಳು ಬರ್ತಾಳೆ ಹೋಯ್ತಾಳೆ ನಾನು ಕೇರ್ ಮಾಡಲ್ಲ ಎನ್ನುವ ಮೂಲಕ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವೇಳೆ ಸಾಕಷ್ಟು ಮಂದಿ ದರ್ಶನ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಅಲ್ಲದೆ, ದೂರು ಸಹ ದಾಖಲಿಸಿದ್ದರು. ಬಳಿಕ ಕಾಟೇರ ಚಿತ್ರಕತೆ ಬರೆಸಿದ್ದು ಮತ್ತು ಟೈಟಲ್ ಇಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನೀಡಿದ ಹೇಳಿಕೆಗೆ ತಿರುಗೇಟು ನೀಡುವ ಬರದಲ್ಲಿ ತಗಡೇ ಎಂದು ನಿಂದಿಸುವ ಮೂಲಕ ದರ್ಶನ್ ಮತ್ತೊಮ್ಮೆ ಸುದ್ದಿಯಾದರು.
ಇದಾದ ನಂತರ ಜೆಟ್ಲಾಗ್ ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣದಲ್ಲೂ ದರ್ಶನ್ ಹೆಸರು ಕೇಳಿಬಂತು. ಇದೀಗ ಗಜಪಡೆ ಹೆಸರಿನ ದರ್ಶನ್ ಅಭಿಮಾನಿ ಎಕ್ಸ್ ಪೇಜ್ನಲ್ಲಿ ಅಶ್ವಿನಿ ಪುನೀತ್ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ದರ್ಶನ್ ಅಭಿಮಾನಿ ಮಾತನಾಡಿದ್ದು, ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ದರ್ಶನ್ರಂತೆ ದರ್ಶನ್ ಅಭಿಮಾನಿಗಳು ಕೂಡ ವರ್ತಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ವಿವಾದ ನಡುವೆ ದರ್ಶನ್ ತಮ್ಮ ಕೈ ಆಪರೇಷನ್ಗೆ ಒಳಗಾಗಿದ್ದಾರೆ. ಇದೆಲ್ಲವನ್ನು ನೋಡಿದರೆ ದರ್ಶನ್ ಟೈಂ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಸ್ವಾಮೀಜಿಗಳು ಹೇಳಿರುವ ಮಾತುಗಳು ನಿಜ ಎನಿಸುತ್ತಿದೆ.
30ಕ್ಕೂ ಹೆಚ್ಚು ಬಾರಿ… ಈಕೆಯ ಕಾಮದಾಹಕ್ಕೆ ಅಪ್ರಾಪ್ತರೇ ಟಾರ್ಗೆಟ್! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು
ಪ್ರೇಮಿಗಳೇ ಎಚ್ಚರ! ಪ್ರೀತಿಗೆ ವಿಲ್ಲನ್ ಈ ಘೋಸ್ಟಿಂಗ್: ಯಾವುದೇ ಕ್ಷಣದಲ್ಲೂ ನಿಮ್ಮನ್ನು ಆವರಿಸಬಹುದು