ಅಹಮದಾಬಾದ್: ಮಾಜಿ ವೇಗಿಗಳಾದ ಚೇತನ್ ಶರ್ಮ, ಮುಂಬೈನ ಅಬೆ ಕುರುವಿಲ್ಲಾ ಮತ್ತು ಒಡಿಶಾದ ದೇಬಾಶಿಶ್ ಮೊಹಾಂತಿ ರಾಷ್ಟ್ರೀಯ ಆಯ್ಕೆ ಸಮಿತಿಯ ಮೂವರು ಹೊಸ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಭಾರತ ಪರ ಅತ್ಯಧಿಕ ಟೆಸ್ಟ್ ಆಡಿರುವ ಅನುಭವದ ಆಧಾರದಲ್ಲಿ ಚೇತನ್ ಶರ್ಮ ಹೊಸ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.
ಮದನ್ ಲಾಲ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ), ಮೂವರು ಆಯ್ಕೆಗಾರರ ಹುದ್ದೆಗೆ 11 ಅಭ್ಯರ್ಥಿಗಳನ್ನು ಗುರುವಾರ ಆನ್ಲೈನ್ ಮೂಲಕ ಸಂದರ್ಶನ ಮಾಡಿತು. 54 ವರ್ಷದ ಚೇತನ್ ಶರ್ಮ ಉತ್ತರ, 52 ವರ್ಷದ ಅಬೆ ಕುರುವಿಲ್ಲಾ ಪಶ್ಚಿಮ ಮತ್ತು 44 ವರ್ಷದ ಮೊಹಾಂತಿ ಪೂರ್ವ ವಲಯದಿಂದ ಆಯ್ಕೆಯಾದರು.
ಇದನ್ನೂ ಓದಿ: 2022ರಲ್ಲಿ 10 ತಂಡಗಳ ಐಪಿಎಲ್, ಬಿಸಿಸಿಐ ಎಜಿಎಂನಲ್ಲಿ ಒಪ್ಪಿಗೆ
ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಅಜಿತ್ ಅಗರ್ಕರ್, ನಯನ್ ಮೊಂಗಿಯಾ, ಮಣಿಂದರ್ ಸಿಂಗ್, ವಿಜಯ್ ದಹಿಯಾ, ಅಜಯ್ ರಾತ್ರಾ, ನಿಖಿಲ್ ಚೋಪ್ರಾ, ಶಿವಸುಂದರ್ ದಾಸ್, ರಣದೇಬ್ ಬೋಸ್ ನಿರಾಸೆ ಅನುಭವಿಸಿದರು.
ಆರ್ಪಿ ಸಿಂಗ್ ಮತ್ತು ಸುಲಕ್ಷಣಾ ನಾಯ್ಕ ಅವರನ್ನು ಒಳಗೊಂಡ ಹಿಂದಿನ ಸಿಎಸಿಗೆ ಈ ಸಲವೂ ಆಯ್ಕೆಗಾರರನ್ನು ಆರಿಸುವ ಹೊಣೆಯನ್ನು ಬಿಸಿಸಿಐ ವಹಿಸಿತ್ತು. ಕರೊನಾ ಹಾವಳಿಯಿಂದಾಗಿ ಆನ್ಲೈನ್ ಮೂಲಕ ಸಂದರ್ಶನ ಪ್ರಕ್ರಿಯೆ ನಡೆಸಲಾಯಿತು.
ಇದನ್ನೂ ಓದಿ: ಹೇರ್ಕಟ್ ಮಾಡಿಸಿಕೊಳ್ಳದಂತೆ ಕ್ರಿಕೆಟಿಗರಿಗೆ ದಿಢೀರ್ ನಿರ್ಬಂಧ ಹೇರಿದ ಆಸ್ಟ್ರೇಲಿಯಾ!
ಮುಂದಿನ ವರ್ಷ ಫೆಬ್ರವರಿ 5ರಿಂದ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್, 5 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವುದು ಹೊಸ ಆಯ್ಕೆ ಸಮಿತಿಯ ಮೊದಲ ಜವಾಬ್ದಾರಿಯಾಗಿರುತ್ತದೆ. ಕಳೆದ ಫೆಬ್ರವರಿಯಲ್ಲಷ್ಟೇ ನೇಮಕಗೊಂಡಿರುವ ಸುನೀಲ್ ಜೋಶಿ (ದಕ್ಷಿಣ) ಮತ್ತು ಹರ್ವಿಂದರ್ ಸಿಂಗ್ (ಕೇಂದ್ರ) ಆಯ್ಕೆಗಾರರಾಗಿ ಮುಂದುವರಿದಿದ್ದಾರೆ.
ಸುನೀಲ್ ಜೋಶಿ ಕೈತಪ್ಪಿದ ಅಧ್ಯಕ್ಷ ಪಟ್ಟ
ಬಿಸಿಸಿಐ ಹೊಸ ಸಂವಿಧಾನದ ಅನ್ವಯ ಆಯ್ಕೆ ಸಮಿತಿಯ ಐವರು ಸದಸ್ಯರ ಪೈಕಿ ಅತಿ ಹೆಚ್ಚು ಟೆಸ್ಟ್ ಪಂದ್ಯ ಆಡಿರುವವರು ಅಧ್ಯಕ್ಷರಾಗುತ್ತಾರೆ. ಇದರಿಂದಾಗಿ ಕನ್ನಡಿಗ ಸುನೀಲ್ ಜೋಶಿ ಅಧ್ಯಕ್ಷ ಪಟ್ಟ ಕಳೆದುಕೊಂಡಿದ್ದು, ಅವರಿಗಿಂತ ಹೆಚ್ಚು ಟೆಸ್ಟ್ ಆಡಿರುವ ಚೇತನ್ ಶರ್ಮಗೆ ಪಟ್ಟ ಒಲಿದಿದೆ. ಚೇತನ್ ಶರ್ಮ 23 ಟೆಸ್ಟ್ ಆಡಿದ್ದರೆ, ಸುನೀಲ್ ಜೋಶಿ 15 ಟೆಸ್ಟ್ ಆಡಿದ್ದಾರೆ. ಆಯ್ಕೆ ಸಮಿತಿಗೆ ಎಲ್ಲ ಹೊಸ ಸದಸ್ಯರು ನೇಮಕಗೊಂಡ ಬಳಿಕ ಅಧ್ಯಕ್ಷ ಹುದ್ದೆ ಬದಲಾಗಬಹುದು ಎಂದು ಸುನೀಲ್ ಜೋಶಿಗೆ ಈ ಮೊದಲೇ ತಿಳಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಪಿತೃತ್ವ ರಜೆ ವಿಚಾರದಲ್ಲಿ ಕೊಹ್ಲಿ-ನಟರಾಜನ್ ನಡುವೆ ಬಿಸಿಸಿಐ ತಾರತಮ್ಯ, ಗಾವಸ್ಕರ್ ಆರೋಪ
‘ಮತ್ತೊಮ್ಮೆ ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ನಾನು ಹೆಚ್ಚು ಮಾತನಾಡುವ ವ್ಯಕ್ತಿಯಲ್ಲ. ನನ್ನ ಕೆಲಸಗಳೇ ಪದಗಳಿಗಿಂತ ಹೆಚ್ಚು ದೊಡ್ಡದಾಗಿ ಮಾತನಾಡುತ್ತವೆ’ ಎಂದು ಚೇತನ್ ಶರ್ಮ ಹೇಳಿದ್ದಾರೆ. 11 ವರ್ಷಗಳ ವೃತ್ತಿಜೀವನದಲ್ಲಿ ಚೇತನ್ ಶರ್ಮ 65 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. 1987ರ ವಿಶ್ವಕಪ್ನಲ್ಲಿ ಅವರು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಯೂ ಅವರದಾಗಿದೆ.
ಒಂದು ವರ್ಷದ ಅವಧಿಯ ಬಳಿಕ ಎಲ್ಲ ಆಯ್ಕೆಗಾರರ ಕಾರ್ಯನಿರ್ವಹಣೆಯನ್ನು ಸಿಎಸಿ ಪರಿಶೀಲಿಸಲಿದ್ದು, ಬಳಿಕ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ.