ತುಮಕೂರು: ಕ್ವಾರಂಟೈನ್ನಲ್ಲಿದ್ದ ಇಬ್ಬರಿಗೆ ಮಂಗಳವಾರ ಕರೊನಾ ಸೊಂಕು ದೃಢವಾಗಿದೆ ಎಂದು ರಾಜ್ಯ ಸರ್ಕಾರ ಸಂಜೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಗೊಂದಲಕ್ಕೆ ಕಾರಣವಾಗಿತ್ತು.
ಈ ಹಿಂದೆ ಪಾಸಿಟಿವ್ ಬಂದಿದ್ದ 21 ವರ್ಷದ ಪಿ.3732 ಹಾಗೂ 39 ವರ್ಷದ ಪಿ.3733 ಇಬ್ಬರನ್ನೂ 10 ದಿನಗಳ ನಂತರ ಮತ್ತೆ ಪರೀಕ್ಷೆ ಒಳಪಡಿಸಿದಾಗ ಮತ್ತೆ ಪಾಸಿಟಿವ್ ಬಂದಿದೆ ಎಂದು ತಪ್ಪಾಗಿ ವರದಿ ನೀಡಿತ್ತು, ಆದರೆ ಜಿಲ್ಲೆಯಲ್ಲಿ ಯಾವುದೇ ಹೊಸ ಸೋಂಕಿತ ಪ್ರಕರಣ ದಾಖಲಾಗ್ಲಿ, ಅಂಕಿಅಂಶ ನೀಡುವಾಗ ರಾಜ್ಯಮಟ್ಟದಲ್ಲಿ ಗೊಂದಲ ಅಗಿದೆ, ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ವಿಜಯವಾಣಿಗೆ ಖಚಿತಪಡಿಸಿದ್ದಾರೆ.
ಮಂಗಳವಾರ ಒಂದೇ ದಿನ ಐವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಂದ ಬಿಡುಗಡೆಯಾಗಿದ್ದು ನೆಮ್ಮದಿ ತಂದಿದೆ. ಪಿ.1688, ಪಿ.764, ಪಿ.793, ಪಿ.794 ಹಾಗೂ ಪಿ.1979 ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆ ಸಿಬ್ಬಂದಿ ಹೂಗುಚ್ಛ ನೀಡಿ ಬೀಳ್ಕೊಟ್ಟರು.
9372 ಜನರಿಗೆ ನೆಗೆಟಿವ್: ಹೆಚ್ಚಾಗುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ 10,122 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, 9372 ಜನರಿಗೆ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಪತ್ತೆಯಾಗಿದ್ದ 31 ಪಾಸಿಟಿವ್
ಪೈಕಿ ಪ್ರಸ್ತುತ ಸಕ್ರಿಯ ಪ್ರಕರಣಗಳು 18ಕ್ಕೆ ಇಳಿಕೆಯಾಗಿದ್ದು ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ಮೂಡಿಸಿದೆ.
ಮೂರ್ನಾಲ್ಕು ದಿನದಿಂದ ಹೊಸ ಪ್ರಕರಣ ಪತ್ತೆಯಾಗಿಲ್ಲ. ಮಂಗಳವಾರವೂ 184 ಜನರ ಗಂಟಲದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 983 ಶಂಕಿತರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಸೋಂಕಿನ ಕಾರಣಕ್ಕೆ ಜಿಲ್ಲೆಯಲ್ಲಿ ಇಬ್ಬರು ಮಾತ್ರ ಸಾವನ್ನಪ್ಪಿದ್ದು, ಇನ್ನುಳಿದವರ ಆರೋಗ್ಯ ಸ್ಥಿರವಾಗಿದೆ. ಹೊರ ರಾಜ್ಯಗಳಿಂದ ಆಗಮಿಸಿರುವ ಜಿಲ್ಲಾ ನಿವಾಸಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಜಿಲ್ಲೆಯಲ್ಲಿಯೇ ಸ್ಥಾಪಿಸಲಾಗಿರುವ ಪರೀಕ್ಷಾ ಕೇಂದ್ರದಲ್ಲಿ ಫಲಿತಾಂಶ ಪಡೆಯಲಾಗುತ್ತಿದೆ.
ವಿಮೆ ವಿನಾಯಿತಿ ನೀಡಿದರೆ ಖಾಸಗಿ ಬಸ್ ಸೇವೆ: ತುಮಕೂರು: ಸರ್ಕಾರ ವಿಮೆ ವಿನಾಯಿತಿ ಹಾಗೂ ಮಾಸಿಕ ಕಂತು ರಿಯಾಯಿತಿ ನೀಡಿದರೆ ಖಾಸಗಿ ಬಸ್ಗಳ ಸೇವೆ ಪುನರಾರಂಭವಾಗಲಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಬಲಶ್ಯಾಮಸಿಂಗ್ ತಿಳಿಸಿದರು. ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಖಾಸಗಿ ಬಸ್ ಮಾಲೀಕರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪಿದರೆ ಸೇವೆ ನೀಡಬಹುದು ಎಂದರು. ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಸ್ ಮಾಲೀಕರ ಬೇಡಿಕೆ ತಿಳಿಸಲಾಗಿದೆ, ಬಸ್ ಮೇಲಿನ ತ್ರೈಮಾಸಿಕ ತೆರಿಗೆಗೆ ಡಿಸೆಂಬರ್ವರೆಗೆ ವಿನಾಯಿತಿ ನೀಡಬೇಕು ಮತ್ತು ಜೂನ್ವರೆಗೆ ಶೇ.50 ತೆರಿಗೆ ಕಟ್ಟಲು ಅವಕಾಶ ನೀಡಬೇಕು, ಮಾಸಿಕ ಕಂತು ಹಾಗೂ ವಿಮೆಯಲ್ಲಿ ವಿನಾಯಿತಿ ನೀಡಿದರೆ ಬಸ್ಗಳು ಓಡಾಡಲು ಸಾಧ್ಯ ಎಂದರು. ಜಿಲ್ಲೆಯಲ್ಲಿ 540 ಬಸ್ಗಳಿದ್ದು, ಕೈಗಾರಿಕೆಗಳಿಗೆ ನೀಡುವಂತೆ ರಿಯಾಯಿತಿ ದರದಲ್ಲಿ ಡಿಸೇಲ್ ನೀಡಬೇಕು, ಸರ್ಕಾರದ ಮಾರ್ಗಸೂಚಿಯಂತೆ ಪ್ರಯಾಣಿಕರನ್ನು ಕರೆದೊಯ್ದರೆ ಬಸ್ ಮಾಲೀಕರು ನಷ್ಟಕ್ಕೆ ಒಳಗಾಗುತ್ತಾರೆ ಎಂದರು. ಸಂಘದ ಕಾರ್ಯದರ್ಶಿ ಎಂ.ಎಸ್.ಶಂಕರನಾರಾಯಣ್, ನಿರ್ದೇಶಕರಾದ ಪಿ.ಆರ್.ಮಂಜುನಾಥ್, ಎಸ್.ಬಿ.ಕೃಷ್ಣಮೂರ್ತಿ, ಎ.ಎಸ್.ರುದ್ರಮೂರ್ತಿ ಇದ್ದರು.