ತುಮಕೂರು: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಚುನಾವಣಾ ಪ್ರಚಾರ ಜೋರಾಗಿದೆ. ಇದರ ನಡುವೆ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸಹ ವರದಿಯಾಗುತ್ತಿವೆ. ಇದೀಗ ತುಮಕೂರಿನ ಕುಣಿಗಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೌಡಿಸಂ ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಇದುವರೆಗೂ ಮಂಡ್ಯ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆಯುತ್ತಿತ್ತು. ಆದರೆ, ಈ ಬಾರಿ ಮಂಡ್ಯಕ್ಕಿಂತ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶದ ಗಮನ ಸೆಳೆದಿದೆ. ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದನನ್ನು ಸೋಲಿಸಲು ಬಿಜೆಪಿ ಈ ಬಾರಿ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ, ಹೃದ್ರೋಗ ತಜ್ಞ ಹಾಗೂ ಜಯದೇವ ಸಂಸ್ಥೆಯ ನಿರ್ದೇಶಕರಾಗಿ ರಾಜ್ಯದಲ್ಲಿ ಜನಮನ್ನಣೆ ಗಳಿಸಿರುವ ಡಾ.ಸಿ.ಎನ್ ಮಂಜುನಾಥ್ ಕಣದಲ್ಲಿದ್ದಾರೆ.
ಡಾ. ಮಂಜುನಾಥ್ ಪರ ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಪ್ರಚಾರ ಮಾಡಿದ್ದರು. ಅಲ್ಲದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲ್ಲು ಹೆಚ್ಚು ಒತ್ತುಕೊಡುವಂತೆ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರಿಗೆ ಅಮಿತ್ ಷಾ ಸೂಚನೆ ನೀಡಿದ್ದಾರೆ. ಈ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವಿಶೇಷ ಗಮನ ಸೆಳೆಯುತ್ತಿದೆ. ಪ್ರತಿಸ್ಪರ್ಧಿ ಡಿ.ಕೆ.ಸುರೇಶ್ ಅವರಿಗೂ ಕೂಡ ಈಗಾಗಲೇ ತಳಮಳ ಶುರುವಾಗಿದೆ. ಇದರ ನಡುವೆ ಕಾಂಗ್ರೆಸ್ ಕಾರ್ಯಕರ್ತರು ರೌಡಿಸಂ ಶುರು ಮಾಡಿರುವ ಆರೋಪವೂ ಕೇಳಿಬಂದಿದೆ.
ಜೆಡಿಎಸ್ ಬೆಂಬಲಿಗರ ಮೇಲೆ ಹಲ್ಲೆ
ನಿನ್ನೆ (ಏಪ್ರಿಲ್ 10) ಕುಣಿಗಲ್ನ ಕೆಂಪನಹಳ್ಳಿ ಗ್ರಾಮ ಪಂಚಾಯಿತಿಯ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಮೇಲೆ ಕಾಂಗ್ರೆಸ್ನ ಬೊರೇಗೌಡ ಹಾಗೂ ಬೆಂಬಲಿಗರಿಂದ ಹಲ್ಲೆ ನಡೆದಿತ್ತು. ಈ ಘಟನೆ ಕುಣಿಗಲ್ ತಾಲ್ಲೂಕಿನ ಅಂಚೇಪಾಳ್ಯದಲ್ಲಿ ನಡೆದಿತ್ತು. ಸಂಜೆ 6.40ರ ಸುಮಾರಿಗೆ ನಿನ್ನೊಂದಿಗೆ ಮಾತನಾಡಬೇಕೆಂದು ಮಂಜುನಾಥ್ನನ್ನ ಕರೆಸಿಕೊಂಡ ಬೋರೇಗೌಡ, ಅಂಚೇಪಾಳ್ಯದ ಬಳಿ ಮಂಜುನಾಥ್ ಬರುತ್ತಿದ್ದಂತೆ ಏಕಾಏಕಿ ಚಾಕುವಿಂದ ತಿವಿದು ಹಲ್ಲೆ ಮಾಡಿದ್ದಾನೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮಂಜುನಾತ್ ಕೆಳಗೆ ಬಗ್ಗಿದ್ದಾನೆ. ಇದರಿಂದ ಚಾಕು ಮಂಜುನಾಥನ ತಲೆಗೆ ಚುಚ್ಚಿದೆ. ತಲೆಗೆ ಪೆಟ್ಟಾಗಿದ್ದು, ಕುಣಿಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯನ್ನು ದೂರು ದಾಖಲಾಗಿದೆ.
ಇದೀಗ ಕೊತ್ತಗೆರೆ ಹೋಬಳಿಯ ಜೆಡಿಎಸ್ ಮುಖಂಡ ಚಂದ್ರಪ್ಪ ಎಂಬುವರ ಮೇಲೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ್ ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರೆಲ್ಲರೂ ಕಾಂಗ್ರೆಸ್ ನಾಯಕರು ಎನ್ನಲಾಗಿದೆ.
ಮಂಜುನಾಥ್ ಪರ ಕೆಲಸ ಮಾಡದಂತೆ ಬೆದರಿಕೆ
ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಕೆಲಸ ಮಾಡದಂತೆ ಬೆದರಿಕೆ ಹಾಕಿ, ಹಲ್ಲೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ರೌಡಿಸಂ ಶುರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ನೀಡಲಾಗಿದೆ.
ಟ್ರಾಫಿಕ್ನಲ್ಲಿ ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದು ಬ್ಯಾನ್! ಆಹ್ವಾನವಿಲ್ಲದೆ ಮನೆಗಳಿಗೂ ಹೋಗುವಂತಿಲ್ಲ
ಈ ವರ್ಷವೇ ಕೊನೆ! 2025ಕ್ಕೆ ರೋಹಿತ್ ಶರ್ಮಾ ಆ ತಂಡದಲ್ಲಿರುತ್ತಾರೆ… ಶಾಕ್ ಕೊಟ್ಟ ಮಾಜಿ ಕ್ರಿಕೆಟಿಗ