ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಕಾರ್ಯಾಚರಣೆಯಲ್ಲಿ ಭದ್ರತಾಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದ ಕಾರು ಬಾಂಬ್ ಪಾಕಿಸ್ತಾನದಲ್ಲಿ ತಯಾರಾಗಿದ್ದು ಎಂಬುದು ಸ್ಪಷ್ಟವಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್, ಜೈಷ್ ಮತ್ತು ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಉಗ್ರ ಸಂಘಟನೆಗಳು ಈ ಬಾಂಬ್ ಅನ್ನು ರೂಪಿಸಿರಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಈ ಕಾರು ಬಾಂಬ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಬಾಂಬ್ ತಯಾರಕ ವಲೀದ್ ಭಾಯ್ ಮಿದುಳು ಇದರ ಹಿಂದೆ ಇರುವುದು ಸ್ಪಷ್ಟವಾಗಿದೆ. ಆದ್ದರಿಂದ, ಈ ಕಾರು ಬಾಂಬ್ ಮೇಡ್ ಇನ್ ಪಾಕಿಸ್ತಾನ್ ಎಂದು ಖಚಿತವಾಗಿ ಹೇಳಿದ್ಧಾರೆ.
ಕಾರ್ಯಾಚರಣೆ ನಡೆದದ್ದು ಹೀಗೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಲು ಉದ್ದೇಶಿಸಿದ್ದ ಕಾರು ಬಾಂಬು ದಾಳಿಯನ್ನು ವಿಫಲಗೊಳಿಸುವಲ್ಲಿ ಭದ್ರತಾಪಡೆ ಸಿಬ್ಬಂದಿಗೆ ಸಿಕ್ಕ ಬೇಹುಗಾರಿಕಾ ಮಾಹಿತಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದೆ.
ಬುಧವಾರ ರಾತ್ರಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಯ ಉಗ್ರ ಸ್ಫೋಟಕ ತುಂಬಿದ್ದ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವ ಬಗ್ಗೆ ಭದ್ರತಾಪಡೆ ಸಿಬ್ಬಂದಿಗೆ ಖಚಿತ ಮಾಹಿತಿ ದೊರೆತಿತ್ತು. ಆದರೆ, ಆತ ಯಾವ ಮಾರ್ಗದಲ್ಲಿ ಬರುತ್ತಿದ್ದಾನೆ ಎಂಬುದು ಸ್ಪಷ್ಟವಾಗಿರಲಿಲ್ಲ. ಹಾಗಾಗಿ ಕಣಿವೆ ರಾಜ್ಯದೆಲ್ಲೆಡೆ ನಾಕಾಬಂದಿ ಏರ್ಪಡಿಸಿ, ಬಿಳಿ ಬಣ್ಣದ ಕಾರಿಗಾಗಿ ಶೋಧಿಸಲಾಗುತ್ತಿತ್ತು. ಆಯ್ಖಂಡ್ನಲ್ಲಿ ಬಿಳಿ ಬಣ್ಣದ ಕಾರು ಕಾಣಿಸಿತ್ತು.
ಇದನ್ನೂ ಓದಿ: VIDEO: ಪುಲ್ವಾಮಾ ಮಾದರಿ ದಾಳಿಯ ಕಾರು ಸ್ಪೋಟಗೊಂಡಿದ್ದು ಹೀಗೆ..
ಕಾರನ್ನು ಗಮನಿಸಿದ ಭದ್ರತಾಪಡೆ ಸಿಬ್ಬಂದಿ, ಕಾರನ್ನು ನಿಲ್ಲಿಸಲು ಮುಂದಾದರು. ಅದನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಆರಂಭಿಸಿದರು. ಹಾಗೂ ಹೀಗೂ ದಾಳಿಯಿಂದ ತಪ್ಪಿಸಿಕೊಂಡ ಉಗ್ರ ಸ್ವಲ್ಪ ದೂರದವರೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದ. ಆದರೆ, ಗುಂಡಿನ ದಾಳಿ ಹೆಚ್ಚಾಗುತ್ತಲೇ ಕಾರನ್ನು ನಿಲ್ಲಿಸಿ, ತಾನೂ ಗುಂಡು ಹಾರಿಸುತ್ತಾ ಕತ್ತಲಲ್ಲಿ ಕಾಡಿನೊಳಗೆ ಪರಾರಿಯಾದ ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ.
ಉಗ್ರರು ಒಂದಾಗಿದ್ದಾರೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ವಿವಿಧ ಸಂಘಟನೆಗಳ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಘಟನೆಗಳ ನಡುವೆ ಸೈದ್ಧಾಂತಿಕವಾಗಿ ಭಿನ್ನತೆಗಳಿರಬಹುದು. ಆದರೆ, ದಾಳಿಯ ವಿಷಯದಲ್ಲಿ ಅವರೆಲ್ಲರೂ ಒಂದಾಗಿದ್ದಾರೆ ಎಂಬುದಕ್ಕೆ ಪುಲ್ವಾಮಾ ಬಳಿ ಪತ್ತೆಯಾಗಿರುವ ಈ ಕಾರು ಬಾಂಬ್ ಸಾಕ್ಷಿ. ಈ ಸಂಚನ್ನು ಜೈಷ್ ಮತ್ತು ಲಷ್ಕರ್ ಎ ತೊಯ್ಬಾದ ಉಗ್ರರ ಜಂಟಿಯಾಗಿ ರೂಪಿಸಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಗೂಖ್ರಾ ಭೂಕಂಪಕ್ಕೂ ಜಗ್ಗಿಲ್ಲ ಹಿಮಾಲಯ ಪರ್ವತ, ಖಚಿತಪಡಿಸಿದ ಚೀನಾ