ಅಹಮದಬಾದ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಇನ್ನೇನು ಕೆಲವೇ ಘಂಟೆಗಳು ಬಾಕಿಯಿದ್ದು, ಪಂದ್ಯ ಶುರುವಾಗುವುದಕ್ಕೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಎಂಬ ಪದವು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಉಭಯ ತಂಡಗಳು ಸೆಣಸಾಡಲಿವೆ. ಆದರೆ, ಪಂದ್ಯ ಶುರುವಾಗುವುದಕ್ಕೂ ಮುನ್ನ ಬಿಸಿಸಿಐ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಅದಕ್ಕೆ ಸಂಬಂಧಿಸಿದಂತೆ ಭರ್ಜರಿ ಪ್ರಚಾರ ನೀಡುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಪಾಕಿಸ್ತಾನ ತಂಡದ ಆಟಗಾರರಿಗೆ ಅಹಮದಬಾದಿನ ಹೋಟೆಲ್ನಲ್ಲಿ ಭವ್ಯ ಸ್ವಾಗತ ದೊರೆತಿರುವುದು ಹಲವರ ಕಣ್ಣು ಕೆಂಪಗಾಗಿಸಿದ್ದು, ನಮ್ಮ ದೇಶದ ಯೋಧರನ್ನು ಬಲಿ ಪಡೆದಿರುವ ಇವರಿಗೆ ಈ ರೀತಿಯ ಸ್ವಾಗತ ಕೋರುವುದರಲ್ಲಿ ಅರ್ಥವೇನಿದೆ ಎಂದು ಹಲವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಆಪತ್ತು ಎದುರಾಗಿದೆ: ನಾರಾ ಲೋಕೇಶ್ ಆರೋಪ
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬಾಯ್ಕಾಟ್ ಇಂಡೋ ಪಾಕ್ ಮ್ಯಾಚ್ ಎಂಬ ಹ್ಯಾಶ್ಟ್ಯಾಗ್ನಡಿ ಅಭಿಯಾನ ಶುರುವಾಗಿದ್ದು, ಭಾರತದ ಯೋಧರ ಪ್ರಾಣ ಕಸಿದ ಪಾಕಿಸ್ತಾನದ ವಿರುದ್ಧ ಪಂದ್ಯ ಆಯೋಜನೆ ಮಾಡುತ್ತಿರುವ ಬಿಸಿಸಿಐಗೆ ನಾಚಿಕೆಯಾಗಬೇಕು. ಇದಲ್ಲದೆ ವಿಶ್ವಕಪ್ ಉದ್ಘಾಟನೆಗೆ ಇಲ್ಲದಿರುವ ಮನರಂಜನಾ ಕಾರ್ಯಕ್ರಮ ಭಾರತ ಹಾಗೂ ಪಾಕ್ ನಡುವಿನ ಪಂದ್ಯಕ್ಕೆ ಯಾಕೆ ಆಯೋಜನೆ ಮಾಡಲಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಇಂಡೋ ಪಾಕ್ ಮ್ಯಾಚ್ ಹೆಚ್ಚು ಟ್ರೆಂಡ್ ಮಾಡುತ್ತಿದ್ದು, ಕೆಲವರು ಯಾವುದೇ ಕಾರಣಕ್ಕೂ ನಾಳೆ ನಾವು ಪಂದ್ಯ ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇತ್ತ ಬಾಯ್ಕಾಟ್ ಸುದ್ದಿ ಹೊರಬೀಳುತ್ತಿದ್ದಂತೆ ನರೇಂದ್ರ ಮೋದಿ ಕ್ರೀಡಾಂಗಣದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆಯನ್ನು ವಹಿಸಲಾಗಿದೆ.