ಅಮರಾವತಿ: ಕೌಶಲ್ಯಾಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅಕ್ರಮ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಸೇರಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಆಪತ್ತಿದೆ ಎಂದು ಅವರ ಪುತ್ರ ನಾರಾ ಲೋಕೇಶ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಚಂದ್ರಬಾಬು ನಾಯ್ಡು ಅವರ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಬೆದರಿಕೆ ಇದೇ ಎಂದಿದ್ದಾರೆ.
ಇದನ್ನೂ ಓದಿ: ಶವದ ಪಕ್ಕ ಕುಳಿತು ರೋದಿಸಿದ ಕೋತಿ; ಮನಕಲಕುವ ದೃಶ್ಯ ವೈರಲ್
ವಿಜಯವಾಡದಲ್ಲಿರುವ ರಾಜಮಹೇಮದ್ರವರ್ಮ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರು ಬಹಳ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ತೀವ್ರ ಸೋಂಕಿನಿಂದ ಬಳಲುತ್ತಿದ್ದಾರೆ. ಅವರಿಗೆ ಯಾವುದೇ ವೈದ್ಯಕೀಯ ನೆರವನ್ನು ನೀಡಲಾಗುತ್ತಿಲ್ಲ. ಆಂಧ್ರಪ್ರದೇಶ ಸರ್ಕಾರವು ಅವರಿಗೆ ಸ್ಟೆರಾಯ್ಡ್ಗಳನ್ನು ನೀಡಿ ಆರೋಗ್ಯ ಹದಗೆಡುವಂತೆ ಮಾಡಲು ಯತ್ನಿಸುತ್ತಿದೆ.
ಅವರು ಬಂಧನವಾದ ದಿನದಿಂದಲ್ಲೂ ಇಲ್ಲಿಯವರೆಗೂ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಈ ವಿಚಾರವನ್ನು ನಾವು ಜೈಲಿನ ಅಧಿಕಾರಿಗಳು ಹಾಗೂ ವೈದ್ಯರ ಬಳಿ ವಿಚಾರಿಸಿದಾಗ ಅವರು ಯಾವ ಉತ್ತರವನ್ನು ನೀಡದೆ ತೆರಳಿದ್ದಾರೆ. ಒಂದು ವೇಳೆ ಚಂದ್ರಬಾಬು ನಾಯ್ಡು ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಅದಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರೇ ನೇರ ಹೊಣೆ ಎಂದು ಟಿಡಿಪಿ ಪ್ರದಾನ ಕಾರ್ಯದರ್ಶಿ ನಾರಾ ಲೋಕೇಶ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.