ಬೆಂಗಳೂರು: ನಗರದ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ವಿಚಾರವನ್ನು ಖಂಡಿಸಿರುವ ಪ್ರತಿಪಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಬಿಜೆಪಿ ಕಾಂಗ್ರೆಸ್ ಕರ್ನಾಟಕವನ್ನು ಉಗ್ರರ ಪಾಲಿನ ಸ್ವರ್ಗವನ್ನಾಗಿಸುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಈ ಒಂದು ಸಿಂಪಲ್ ಕೆಲಸ ಮಾಡಿದರೆ ನಿಮಗೆ ಸಿಗಲಿದೆ ಸಲಾರ್ ಟಿಕೆಟ್
ಕರ್ನಾಟಕವನ್ನು ಉಗ್ರರ ಪಾಲಿನ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಆದಿಯಾಗಿ ಎಲ್ಲರೂ ಸೆರೆಸಿಕ್ಕ ಉಗ್ರರಿಗೆ ಅಮಾಯಕ ಪಟ್ಟ ಕಟ್ಟಿದ ಕಾರಣ, ಇಂದು ಬೆಂಗಳೂರಿನ ಶಾಲೆಗಳು ಬಾಂಬ್ ಬೆದರಿಕೆಯನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದ ಆರು ತಿಂಗಳಲ್ಲಿ ಬೆಲೆಯೇರಿಕೆ ಜೊತೆ ಮತಾಂಧರ ಸಂಖ್ಯೆ ಸಹ ಏರಿದೆ. ಶಾಂತಿ ನೆಮ್ಮದಿಯ ತವರೂರಾಗಿದ್ದ ಕರ್ನಾಟಕದಲ್ಲಿ ಭದ್ರತಾ ವೈಫಲ್ಯಗಳೇ ಜಾಸ್ತಿಯಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಪ್ರತಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕುಟುಕಿದೆ.