ರಾಯ್ಪುರ: ಇತ್ತೀಚಿನ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ ಆಡುತ್ತಿದ್ದು, 2-1 ಮುನ್ನಡೆಯನ್ನು ಕಾಯ್ದುಕೊಂಡಿದೆ. ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಸರಣಿ ಯಾರ ಪಾಲಾಗಲಿದೆ ಎಂಬ ರೋಚಕತೆ ಸೃಷ್ಟಿಯಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟಿ-20 ಪಂದ್ಯವು ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ ತಂಡವನ್ನು ಸ್ಪೋಟಕ ಬ್ಯಾಟ್ಸ್ಮನ್ ಒಬ್ಬರು ಕೂಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಏಕದಿನ ವಿಶ್ವಕಪ್ ಬಳಿಕ ಆಸೀಸ್ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಇದೀಗ ನಾಲ್ಕು ಮತ್ತು ಐದನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. ಅಮೋಘ ಲಯದಲ್ಲಿರುವ ಅಯ್ಯರ್ ಈ ಟಿ20 ಸರಣಿಯಲ್ಲಿ ಉಪನಾಯಕ ಕೂಡ ಆಗಿದ್ದಾರೆ.
ಇದನ್ನೂ ಓದಿ: ಈ ಒಂದು ಸಿಂಪಲ್ ಕೆಲಸ ಮಾಡಿದರೆ ನಿಮಗೆ ಸಿಗಲಿದೆ ಸಲಾರ್ ಟಿಕೆಟ್
ಶ್ರೇಯಸ್ ಅಯ್ಯರ್ ಅವರು ನಾಲ್ಕನೇ ಟಿ20 ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯುವುದು ಖಚಿತ. ಯಾವಾಗಲೂ ಮಧ್ಯಮ ಕ್ರಮಾಂಕದಲ್ಲಿ ಆಡುವ ಅಯ್ಯರ್ಗೆ ಇಲ್ಲಿ ಯಾರು ಸ್ಥಾನ ಬಿಟ್ಟುಕೊಡುತ್ತಾರೆ ಎಂಬುದು ನೋಡಬೇಕು. ಮೇಲ್ನೋಟಕ್ಕೆ ತಿಲಕ್ ವರ್ಮಾ ಬದಲಿಗೆ ಅಯ್ಯರ್ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಿಕೊಳ್ಳುವ ಸಂಭವವಿದೆ.
ರಿಂಕು ಸಿಂಗ್ ಅವರು ಹೊಸ ಫಿನಿಶರ್ ಆಗಿ ಹೊರಹೊಮ್ಮಿದ್ದಾರೆ. ಮತ್ತು ಅವರ ಸ್ಥಾನದಲ್ಲಿ ಭಾರತ ತಂಡವು ಯಾವುದೇ ಬದಲಾವಣೆಗಳನ್ನು ಮಾಡುವಂತೆ ತೋರುತ್ತಿಲ್ಲ. ಒಂದು ವೇಳೆ ಅಯ್ಯರ್ ಅವರನ್ನು ಟಾಪ್-4ರಲ್ಲಿ ಬ್ಯಾಟಿಂಗ್ ಮಾಡಲು ಬಯಸಿದರೆ, ಟಾಪ್-3 ರಲ್ಲಿರುವ ಒಬ್ಬ ಬ್ಯಾಟ್ಸ್ಮನ್ಗೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗಿದೆ.